×
Ad

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ

Update: 2019-09-04 18:23 IST

ಉಡುಪಿ, ಸೆ.4: ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಸಿಇಟಿ ಮೂಲಕ ಪ್ರವೇಶ ಪಡೆಯುವ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ವಾರ್ಷಿಕ ಗರಿಷ್ಠ ಒಂದು ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುತ್ತದೆ.

2019-20 ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ ಸಿಇಟಿ ಮೂಲಕ ಸೀಟು ಪಡೆದು ವೃತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಸಿಇಟಿ ಪರೀಕ್ಷೆ ಹೊರತುಪಡಿಸಿದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ಅರ್ಹ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆಯ ಬಯಸುವ ಅಭ್ಯರ್ಥಿ ಹಿಂದುಳಿದ ವರ್ಗಗಳ ಪ್ರ-1, ಪ್ರ-2ಎ, ಪ್ರ-3ಎ ಮತ್ತು ಪ್ರ-3ಬಿಗೆ ಸೇರಿದ್ದು, (ವಿಶ್ವಕರ್ಮ ಮತ್ತು ಉಪಜಾತಿಗಳು, ಅಲ್ಪಸಂಖ್ಯಾತರು ಮತ್ತು ಉಪಜಾತಿಗಳು, ಉಪ್ಪಾರ ಮತ್ತು ಉಪಜಾತಿಗಳು ಹಾಗೂ ಬೆಸ್ತ/ ಅಂಬಿಗ ಮತ್ತು ಅದರ ಉಪಜಾತಿಗಳನ್ನು ಹೊರತುಪಡಿಸಿ) ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ 3.50 ಲಕ್ಷ ರೂ.ಗಳ ಮಿತಿಯಲ್ಲಿ ಇರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ವೀಕೃತಗೊಂಡ ಅರ್ಜಿಗಳಲ್ಲಿ ಸರಕಾರದ ಆದೇಶದನ್ವಯ ಪ್ರವರ್ಗ-1 ಮತ್ತು 2ಎಗೆ ಶೇ.70 ಹಾಗೂ ಪ್ರವರ್ಗ 3ಎ, 3ಬಿಗೆ ಶೇ. 30ರಂತೆ ಆಯ್ಕೆ ಮಾಡಲಾಗುವುದು.

ಬಿಇ(ಸಿಇಟಿ), ಎಂಬಿಬಿಎಸ್, ಬಿಯೂಎಂಎಸ್(ಸಿಇಟಿ), ಬಿಡಿಎಸ್ (ಸಿಇಟಿ), ಬಿಎಎಂಎಸ್ (ಸಿಇಟಿ), ಬಿಎಚ್‌ಎಂಎಸ್ (ಸಿಇಟಿ), ಎಂಬಿಎ (ಸಿಇಟಿ), ಎಂಟೆಕ್(ಸಿಇಟಿ), ಎಂಇ, ಎಂಡಿ, ಪಿಹೆಚ್‌ಡಿ, ಬಿಸಿಎ/ ಎಂಸಿಎ, ಎಂಎಸ್ ಅಗ್ರಿಕಲ್ಚರ್, ಬಿಎಸ್‌ಸಿ ನರ್ಸಿಂಗ್, ಬಿಫಾರಂ/ ಎಂಫಾರಂ, ಬಿಎಸ್‌ಸಿ ಪ್ಯಾರಾ ಮೆಡಿಕಲ್, ಬಿಎಸ್ಸಿ ಬಯೋ ಟೆಕ್ನಾಲಜಿ, ಬಿಟೆಕ್, ಬಿಪಿಟಿ, ಬಿಎಸ್‌ಸಿ/ಎಂಎಸ್‌ಸಿ, ಜಿಎನ್‌ಎಂ, ಬಿಹೆಚ್‌ಎಂ, ಎಂಡಿಎಸ್, ಎಂಎಸ್ ಡಬ್ಲ್ಯೂ, ಎಲ್‌ಎಲ್‌ಎಂ, ಎಂಎಫ್‌ಎ, ಎಂಎಸ್‌ಸಿ, ಬಯೋಟೆಕ್ನಾಲಜಿ ಮತ್ತು ಎಂಎಸ್‌ಸಿ ಎಜಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರಿವು ಶೈಕ್ಷಣಿಕ ಸಾಲ ಯೋಜನೆಯ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.

ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಉಡುಪಿ ಜಿಲ್ಲಾ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು, ಸಕ್ಷಮ ಪ್ರಾಧಿಕಾರ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ, ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ, ಎಸೆಸೆಲ್ಸಿ ಅಂಕಪಟ್ಟಿ, ಸಿಇಟಿ/ನೀಟ್ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್, ಸ್ಟಡಿ ಸರ್ಟಿಫಿಕೇಟ್ ಮತ್ತು ಫೀ ಸ್ಟ್ರಕ್ಚರ್ ಮೂಲ ಪ್ರತಿ, ವಿದ್ಯಾರ್ಥಿ ಹೊಂದಿರುವ ಬ್ಯಾಂಕ್ ಪಾಸ್ ಪುಸ್ತಕದ ದೃಢೀಕೃತ ಪ್ರತಿ ಯೊಂದಿಗೆ ಸೆ.16ರೊಳಗೆ ಜಿಲ್ಲಾ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ನಿಗಮದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News