ಕಾಪು : ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ
ಕಾಪು : ಕಾಪು ಕ್ಷೇತ್ರದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಇದರ ಸದ್ಬಳಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿಯತ್ತ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಕಾಪು ಕ್ಷೇತ್ರದ ಅಭಿವೃದ್ಧಿಗೆ ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ಬುಧವಾರ ಕಾಪು ಪುರಸಭಾ ಸಭಾಭವನದಲ್ಲಿ ನಡೆದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾವಿರಾರು ಕೋಟಿಯ ಯೋಜನೆಗಳು ಕಾಪು ಕ್ಷೇತ್ರಗಳಲ್ಲಿ ಇದ್ದರೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಕೈಗಾರಿಕೆಗಳು ಇನ್ನಷ್ಟು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಂಡಬೇಕಾಗಿದೆ. ಕಾಪು, ಪಡುಬಿದ್ರಿ, ಬ್ಲೂಫ್ಲಾಗ್ ಬೀಚ್ಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸೋಧ್ಯಮಕ್ಕೆ ಹೊಸ ಚೈತನ್ಯ ತುಂಬಲಾಗುವುದು ಎಂದರು.
ಮೆಸ್ಕಾಂಗೆ ಕಚೇರಿಗೆ ಸೂಕ್ತ ನಿವೇಶನ, ಮಿನಿ ವಿಧಾನಸೌಧ ಸಹಿತ ವಿವಿಧ ಕಚೇರಿಗಳಿಗೆ ಕಟ್ಟಡ ನಿರ್ಮಾಣ, ಮಿನಿವಿಧಾನಸೌಧ ನಿರ್ಮಾಣ ಕ್ಕಾಗಿ 10 ಕೋಟಿ ರೂ. ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಬೆಳಪು ಗ್ರಾಮ ಪಂಚಾಯತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ್ಕೆ ಸ್ಥಳ ಗುರುತಿಸಲಾಗಿದೆ. ಇದುವರೆಗೆ ಮಂಜೂರ ಮಾಡಲಾಗಿಲ್ಲ. ಕೈಗಾರಿಕಾ ವಲಯಕ್ಕೆ ಸೂಕ್ತ ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಕೈಗಾರಿಕೋದ್ಯಮಗಳು ಬರಲು ಹಿಂದೇಟು ಹಾಕುತ್ತಿದ್ದಾರೆ ಈ ಕೂಡಲೇ ಇದಕ್ಕೆ ಸಂಪರ್ಕ ರಸ್ತೆಯನ್ನು ಕಲ್ಪಿಸಿಕೊಡಬೇಕೆಂದು ಗ್ರಾ.ಪಂ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಹೇಳಿದರು.
ಕಾಪು ಸದಸ್ಯ ಅರುಣ್ ಶೆಟ್ಟಿ ಪಾದೂರು, ಫಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಪುಟಾರ್ಡೊ, ಪುರಸಭೆ ಸದಸ್ಯ ಅನಿಲ್, ಶಿರ್ವ ಗ್ರಾಮ ಪಂ. ಅಧ್ಯಕ್ಷೆ ವಾರಿಜಾ, ಎಲ್ಲೂರು ಗ್ರಾಮ ಪಂ. ಉಪಾಧ್ಯಕ್ಷ ಜಯಂತ್ ಕುಮಾರ್ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಎಡಿಸಿ ಸದಾಶಿವ ಪ್ರಭು, ಜಿಲ್ಲಾ ಪಂ. ಅಧ್ಯಕ್ಷ ದಿನಕರ್ ಬಾಬು, ತಾಲ್ಲೂಕು ಪಂ. ಅಧ್ಯಕ್ಷೆ ನೀತಾ ಗುರುರಾಜ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಖ್, ಜಿಲ್ಲಾ ಪಂ. ಮುಖ್ಯಯೋಜನಾಧಿಕಾರಿ ಶ್ರೀನಿವಾಸ ರಾವ್, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಜಿಲ್ಲಾ ಪಂ. ಸದಸ್ಯರು, ತಾಲ್ಲೂಕು ಪಂ. ಸದಸ್ಯರು, ಗ್ರಾಮ ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪುರಸಭಾ ಸದಸ್ಯರು ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.