ಭಯೋತ್ಪಾದನೆ ಖಂಡಿಸಿದ ಭಾರತ, ಇಂಡೋನೇಶ್ಯ
Update: 2019-09-06 17:08 GMT
ಜಕಾರ್ತ (ಇಂಡೋನೇಶ್ಯ), ಸೆ. 6: ಭಾರತ ಮತ್ತು ಇಂಡೋನೇಶ್ಯ ಗುರುವಾರ ಭಯೋತ್ಪಾದನೆಯನ್ನು ಹಾಗೂ ಅದನ್ನು ನಿಭಾಯಿಸುವಾಗ ಅನುಸರಿಸಲಾಗುವ ‘‘ವಿವಿಧ ಮಾನದಂಡ’ಗಳನ್ನು ಬಲವಾಗಿ ಖಂಡಿಸಿವೆ.
ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಇಂಡೋನೇಶ್ಯದ ವಿದೇಶ ವ್ಯವಹಾರಗಳ ಸಚಿವ ರೆಟ್ನೊ ಮರ್ಸೂಡಿ ಇಲ್ಲಿ ಮಾತುಕತೆ ನಡೆಸಿದ್ದು, ಮಾತುಕತೆಯಲ್ಲಿ ಭಯೋತ್ಪಾದನೆಯೂ ಪ್ರಸ್ತಾಪಗೊಂಡಿತು.
ಜೈಶಂಕರ್ ಸೆಪ್ಟಂಬರ್ 4ರಿಂದ 6ರವರೆಗೆ ಇಂಡೋನೇಶ್ಯ ಪ್ರವಾಸದಲ್ಲಿದ್ದಾರೆ.
‘‘ಭಾರತ ಮತ್ತು ಇಂಡೋನೇಶ್ಯ ಭಯೋತ್ಪಾದನೆಯನ್ನು ಎದುರಿಸುವ ಪ್ರಜಾಪ್ರಭುತ್ವ ದೇಶಗಳಾಗಿದ್ದು, ನಮ್ಮ ಇಂದಿನ ಮಾತುಕತೆಯ ವೇಳೆ ಯಾವುದೇ ರೂಪದ ಭಯೋತ್ಪಾದನೆಯನ್ನು ನಾವು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದ್ದೇವೆ’’ ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ಜೈಶಂಕರ್ ತಿಳಿಸಿದರು.
‘‘ಈ ಜಾಗತಿಕ ಪಿಡುಗಿನೊಂದಿಗೆ ವ್ಯವಹರಿಸುವಾಗ ವಿವಿಧ ಮಾನದಂಡಗಳನ್ನು ಅನುಸರಿಸುವುದಕ್ಕೂ ನಾವು ತೀವ್ರ ವಿರೋಧ ವ್ಯಕ್ತಪಡಿಸಿದ್ದೇವೆ’’ ಎಂದು ಅವರು ಹೇಳಿದರು.