ಪುತ್ತೂರು: ನಾಲ್ಕು ಜೀವ ಬಲಿ ಪಡೆದ ಕೆರೆಯನ್ನು ಮುಚ್ಚಿಸಿದ ಇಲಾಖೆ
ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಮಡ್ಯಂಗಳ ಎಂಬಲ್ಲಿ ಮಾಣಿ-ಮೈಸೂರು ಹೆದ್ದಾರಿಯ ಪಕ್ಕದಲ್ಲಿ ಕಳೆದ ಸೋಮವಾರ ಬೆಳಗ್ಗೆ ಕಾರೊಂದು ಬಿದ್ದು, ನಾಲ್ಕು ಜೀವಗಳನ್ನು ಬಲಿ ಪಡೆದ ಅಪಾಯಕಾರಿ ಕೆರೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಮಣ್ಣು ಹಾಕಿ ಸಂಪೂರ್ಣವಾಗಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಸುಬ್ಬರಾಮ್ ಹೊಳ್ಳ, ಸಹಾಯಕ ಎಂಜಿನಿಯರ್ ರಾಧಾಕೃಷ್ಣ, ತಹಶೀಲ್ದಾರ್ ಅನಂತ ಶಂಕರ್, ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಅಧಿಕಾರಿಗಳಾದ ರಮೇಶ್, ನಾಗರಾಜ್, ಕಂದಾಯ ನಿರೀಕ್ಷಕ ದಯಾನಂದ್ ಹಾಗೂ ಸಂಪ್ಯ ಠಾಣೆಯ ಎಸ್ಐ ಸಕ್ತಿವೇಲು ಅವರು ಮಂಗಳವಾರ ಘಟನೆ ನಡೆದ ಮಡ್ಯಂಗಳಕ್ಕೆ ಭೇಟಿ ನೀಡಿ ಅಪಾಯಕಾರಿ ಕೆರೆಯನ್ನು ಪರಿಶೀಲಿಸಿ ಕೆರೆ ಮುಚ್ಚುವ ನಿರ್ಧಾರ ಕೈಗೊಂಡಿದ್ದರು.
ಈ ಅಪಾಯಕಾರಿ ಕೆರೆಯ ಎದುರು ಭಾಗದಲ್ಲಿ ಹೆದ್ದಾರಿ ಬದಿಯಲ್ಲಿದ್ದ ಪ್ರಪಾತವನ್ನು ಮಣ್ಣು ಹಾಕಿ ಮುಚ್ಚಿಸುವ ಜತೆಗೆ ಹೆದ್ದಾರಿ ಬದಿಯಲ್ಲಿ ಮಣ್ಣು ಹಾಕಿ ಅಪಾಯ ತಪ್ಪಿಸುವ ಕೆಲಸವನ್ನು ಮಂಗಳವಾರವೇ ಆರಂಭಿಸಿದ್ದ ಇಲಾಖೆ ಬಳಿಕ ಕೆರೆ ಮುಚ್ಚುವ ಕೆಲಸ ಆರಂಭಿಸಿತ್ತು. ಶನಿವಾರ ವೇಳೆಗೆ ಕೆರೆಯನ್ನು ಸಂಪೂರ್ಣವಾಗಿ ಮುಚ್ಚವ ಕೆಲಸ ಪೂರ್ಣಗೊಂಡಿದೆ.