ಹೊಸಂಗಡಿಯ ಸುರೇಶ್ಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ
ಬ್ರಹ್ಮಾವರ, ಸೆ.7: ಸರಕಾರಿ ಶಾಲೆಯ ಶಿಕ್ಷಕರಾಗಿ ಶಿಕ್ಷಣ ಮತ್ತು ಸ್ಕೌಟ್ ವಿಭಾಗದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಹೊಸಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸುರೇಶ್ ಅವರಿಗೆ ಭಾರತೀಯ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ರಾಯಚೂರಿನ ಕಲಾ ಸಂಕುಲ ಸಂಸ್ಥೆ ನೀಡುವ ರಾಜ್ಯ ಮಟ್ಟದ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
1990ರಲ್ಲಿ ಹಿಂದಿ ಶಿಕ್ಷಕನಾಗಿ ಹೆಬ್ರಿ ತಾಲೂಕು ಚಾರ ಸರ್ಕಾರಿ ಶಾಲೆಯಲ್ಲಿ ಸೇವೆಗೆ ಪಾದಾರ್ಪಣೆ ಮಾಡಿ ಅದೇ ಶಾಲೆಯಲ್ಲಿ 25 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಬಳಿಕ ಬಡ್ತಿ ಪಡೆದು ಹೊಸಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೆ.8ರ ರವಿವಾರ ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ಪ್ರಶಸ್ತಿ ಪ್ರದಾನ ಮಾಡುವರು.