ಬ್ರಹ್ಮಾವರ-ಚೇರ್ಕಾಡಿ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ: ಸಾರ್ವಜನಿಕ ಸಮಾಲೋಚನಾ ಸಭೆ

Update: 2019-09-10 14:55 GMT

ಬ್ರಹ್ಮಾವರ, ಸೆ.10: ಬ್ರಹ್ಮಾವರದಿಂದ ಚೇರ್ಕಾಡಿವರೆಗಿನ ಸುಮಾರು ಎಂಟು ಕಿ.ಮೀ. ಉದ್ದದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಬಿಡುಗಡೆಗೊಂಡ ಅನುದಾನದಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವ ನಿಟ್ಟಿನಲ್ಲಿ ರಸ್ತೆಬದಿಯ ಮರಗಳ ತೆರವು ಹಾಗೂ ಭೂಸ್ವಾಧೀನ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಗ್ರಾಮಸ್ಥರ ಸಭೆ ಸೋಮವಾರ ಆರೂರು ಗ್ರಾಪಂ ಸಭಾಂಗಣದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಜುಗಿತು.

ಬ್ರಹ್ಮಾವರದಿಂದ ಚೇರ್ಕಾಡಿಯವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 24 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದು 24ಕಿ.ಮೀ. ಅಗಲದ ರಸ್ತೆಯಾಗಿದ್ದು, ನಡುವೆ ಒಂದು ಮೀ. ಅಗಲದ ವಿಭಜಕ ವಿರುತ್ತದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸರ್ವೆ ಮುಗಿದ ತಕ್ಷಣ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಲಿದ್ದಾರೆ ಎಂದು ರಘುಪತಿ ಭಟ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ರಸ್ತೆ ಇಕ್ಕೆಲಗಳಲ್ಲಿ ಇರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಮೆಸ್ಕಾಂಗೆ ತಿಳಿಸಲಾಗಿದೆ ಎಂದರು. ಕಾಮಗಾರಿಗೆ 200ಕ್ಕೂ ಅಧಿಕ ಮರಗಳು ಬಲಿಯಾಗುವ ಸಾಧ್ಯತೆ ಇದೆ. ಸಣ್ಣ ಮರಗಳನ್ನು ಸರಕಾರಿ ಸ್ಥಳಕ್ಕೆ ಸ್ಥಳಾಂತರಿಸುವ ಮತ್ತು ಗ್ರಾಪಂ ನೇತೃತ್ವದಲ್ಲಿ ಒಂದು ಮರ ಕಡಿದರೆ 25 ಗಿಡ ನೆಡುವ ಯೋಜನೆ ಯೊಂದಿಗೆ, ಉತ್ತಮ ಜಾತಿಯ ಮರಗಳನ್ನು ನೆಡುವ ನಿರ್ಣಯವನ್ನು ಕೈ ಗೊಂಡು ಮರ ತೆರವುಗೊಳಿಸಿ ರಸ್ತೆ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಸರ್ವಾನುಮತದಿಂದ ಸಾರ್ವಜನಿಕರು ಒಪ್ಪಿಗೆ ನೀಡಿದರು.

ರಸ್ತೆ ಬದಿಯಲ್ಲಿ ಗ್ರಾಪಂಗಳ ನೀರು ಟ್ಯಾಂಕ್, ನೀರು ಸರಬರಾಜು ಪೈಪ್‌ಲೈನ್, ವಿದ್ಯುತ್ ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬ, ಬೋರ್‌ವೆಲ್ ಗಳು ಇದ್ದು, ಮೂಲಭೂತ ಸೌಕರ್ಯಗಳನ್ನು ಪ್ರಥಮ ಆದ್ಯತೆಯಲ್ಲಿ ಸ್ಥಳಾಂತರಿಸಲು ಮತ್ತು ಈ ಬಗ್ಗೆ ವಿವರವಾದ ಮಾಹಿತಿಯನ್ನು ತಕ್ಷಣ ಗ್ರಾಪಂ ಪಿಡಿಒಗಳು ನಿೀಡುವಂತೆ ಶಾಸಕರು ಸೂಚಿಸಿದರು.

ರಾಜ್ಯ ಹೆದ್ದಾರಿಗಳ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಲು ಸರಕಾರದ ಅನುದಾನ ದೊರೆಯಲಿದ್ದು, ಇದು ಎಂಡಿಆರ್ ರಸ್ತೆ ಆಗಿರುವುದರಿಂದ ಇದರ ಭೂಸ್ವಾಧೀನಕ್ಕೆ ಪರಿಹಾರ ಸಿಗುವುದಿಲ್ಲ. ಶೇ.90ರಷ್ಟು ರಸ್ತೆ ಸರಕಾರಿ ನಿವೇಶನದಲ್ಲಿ ಬರುವುದರಿಂದ, ಉಳಿದ ಖಾಸಗಿ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಉಚಿತವಾಗಿ ಭೂಮಿ ನೀಡುವಂತೆ ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಾರ್ವಜನಿಕರ ಪರವಾಗಿ ಆರೂರು ತಿಮ್ಮಪ್ಪ ಶೆಟ್ಟಿ, ಚಂದ್ರಕಾಂತ ಕಿಣಿ, ಸದಾಶಿವ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಪಿಡಬ್ಲುಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್ ಭಟ್, ಕಿರಿಯ ಇಂಜಿನಿಯರ್ ಗಿರೀಶ್, ಆರೂರು ಗ್ರಾಪಂ ಅಧ್ಯಕ್ಷ ರಾಜು ಕುಲಾಲ್, ತಾಪಂ ಸದಸ್ಯೆ ನಳಿನಿ ಪ್ರದೀಪ್‌ರಾವ್, ಸುಧೀರ್‌ಕುಮಾರ್ ಶೆಟ್ಟಿ, ಚೇರ್ಕಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ, ಆಶಾ ಕೋಟ್ಯಾನ್, ಉದಯ್‌ಕಾಮತ್, ಗುತ್ತಿಗೆದಾರರಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News