ಸೆ.13ರಂದು ಶ್ರೀಪೊಳಲಿ ಷಷ್ಠಿರಥ ಸಮರ್ಪಣಾ ಮುಹೂರ್ತ

Update: 2019-09-10 16:39 GMT

ಬಂಟ್ವಾಳ, ಸೆ. 10: ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವರಿಗೆ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಷಷ್ಠಿರಥ ಸಮರ್ಪಣೆ ಮುಂದಿನ ವರ್ಷ ಜಾತ್ರೆ ಸಂದರ್ಭ ನಡೆಯಲಿದ್ದು, ಇದರ ಹಿನ್ನೆಲೆಯಲ್ಲಿ ಸೆ.13ರಂದು ಮುಹೂರ್ತ ಕಾರ್ಯಕ್ರಮ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ರಾಮ್ ದಾಸ್ ಬಂಟ್ವಾಳ ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 1 ಸಾವಿರದಷ್ಟು ದೇವಾಡಿಗ ಬಂಧುಗಳು ನಾನಾ ಭಾಗಗಳಲ್ಲಿದ್ದು, ಇತರ ಸಮಾಜದವರ ಸಹಾಯ, ಸಹಕಾರದಿಂದ ದೇವರ ಷಷ್ಠಿರಥಕ್ಕೆ ಬೇಕಾಗುವ ಸಾಗುವಾನಿ, ಬೋಗಿ, ಹೆಬ್ಬಲಸು, ಸಂಪಿಗೆ ಮರಗಳ ಸಂಗ್ರಹ ಕಾರ್ಯ ನಡೆಸುತ್ತಿದೆ ಎಂದರು.

ಯೋಜನೆಗೆ ಅಂದಾಜು 40 ಲಕ್ಷ ರೂ. ವೆಚ್ಚ ತಗಲುವ ನಿರೀಕ್ಷೆ ಇದ್ದು, 15 ಲಕ್ಷ ರೂ.ಗಳಷ್ಟು ದೇಣಿಗೆ ಸಂಗ್ರಹವಾಗಬೇಕಿದೆ. ಊರ, ಪರವೂರ ದೇವಾಡಿಗ ಸಮಾಜದ ಪ್ರಮುಖರನ್ನು ಒಗ್ಗೂಡಿಸಿ ಸಮಿತಿ ರಚಿಸಲಾಗಿದ್ದು, ಮೇ 19ರಂದು ಬೃಹತ್ ಸಮಾಲೋಚನಾ ಸಭೆ ದೇವಳ ವಠಾರದಲ್ಲಿ ನಡೆದಿತ್ತು. ಇದೀಗ ಸೆ.13ರಂದು ಶುಕ್ರಬಾರ ಬೆಳಗ್ಗೆ 10ಕ್ಕೆ ಶ್ರೀ ಪೊಳಲಿ ದೇವಳದ ವಠಾರದಲ್ಲಿ ರಥದ ಮರದ ಕೆತ್ತನೆ ಕೆಲಸಗಳ ವಿಧ್ಯುಕ್ತ ಮುಹೂರ್ತವನ್ನು ತಂತ್ರಿಗಳು, ಅರ್ಚಕರು ಮತ್ತು ಆಡಳಿತ ಮಂಡಳಿ ಅನುಮತಿ ಮತ್ತು ಉಪಸ್ಥಿತಿಯೊಂದಿಗೆ ನಡೆಯಲಿದೆ. ಈ ಸಂದರ್ಭ ಸಮಾಜದ ಬಂಧುಗಳು, ಇತರ ಸಮಾಜದ ದಾನಿಗಳು ಭಾಗವಹಿಸುವರು ಎಂದು ರಾಮ್ ದಾಸ್ ಬಂಟ್ವಾಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಾವತಿ ದೇವಾಡಿಗ, ಪ್ರವೀಣ್ ತುಂಬೆ, ದಾಮೋದರ ದೇವಾಡಿಗ, ಸದಾಶಿವ ದೇವಾಡಿಗ, ಪ್ರಕಾಶ್ ದೇವಾಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News