ಭಟ್ಕಳ: ಹೊಗೆ ಪ್ರಮಾಣಪತ್ರಕ್ಕಾಗಿ ಬೈಕ್ ಗಳ ನೂಕು ನುಗ್ಗಲು

Update: 2019-09-11 16:39 GMT

ಭಟ್ಕಳ: ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ತಿದ್ದುಪಡಿಯಿಂದಾಗಿ ದ್ವಿಚಕ್ರ ವಾಹನ ಚಾಲಕರು ತಮ್ಮ ಬೈಕ್ ಗಳನ್ನು ವಾಯುಮಾಲಿನ್ಯ ಪರೀಕ್ಷೆಗೊಳಪಡಿಸಿ ಪ್ರಮಾಣ ಪತ್ರ ಪಡೆಯಲು ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳ ಮುಂದೆ ನೂಕು ನುಗ್ಗಲು ಆರಂಭಿಸಿದ್ದಾರೆ.

ಮಂಗಳವಾರ ಇಲ್ಲಿನ ರಾ.ಹೆ. 66 ರ ಸಾಮ್ಕೋ ಹಿಂಬದಿಯ ವಾಯುಮಾಲಿನ್ಯ ಕೇಂದ್ರದಲ್ಲಿ ಬೈಕ್ ಸವಾರರು ಸರತಿಯಲ್ಲಿ ನಿಂತುಕೊಂಡು ತಮ್ಮ ವಾಹನಗಳ ವಾಯುಮಾಲಿನ್ಯ ಎಮಿಷನ್‍ಟೆಸ್ಟ್ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂತು.

ಕೇಂದ್ರದ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಂತೆ ಪ್ರತಿಯೊಬ್ಬ ವಾಹನ ಚಾಲಕ ದ್ವಿಚಕ್ರ ವಾಹನವಾದರೆ, ಹೆಲ್ಮೆಟ್, ಚಾಲನ ಪ್ರಮಾಣ ಪತ್ರ, ಹೊಗೆ ಪ್ರಮಾಣ ಪತ್ರ ಇನ್ಸುರೆನ್ಸ್ ಮತ್ತಿತರರ ಅಗತ್ಯ ದಾಖಲೆಪತ್ರೆಗಳನ್ನು ಹೊಂದಿರುವುದು ಅಗತ್ಯವಾಗಿದ್ದು ಇಲ್ಲದೆ ಹೋದರೆ ಸಾವಿರಾರು ದಂಡ ತೆರಬೇಕಾದೀತು. ದಂಡ ತೆರುವ ಭಯದಿಂದ ಈಗ ಬೈಕ್ ಹಾಗೂ ವಾಹನ ಚಾಲಕರು ತಮ್ಮ ವಾಹನಗಳನ್ನು ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ.

ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳಿದ್ದು ದಂಡದ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಸೆ.1 ರಿಂದಲೇ ನೂತನ ನಿಯಮಗಳು ಜಾರಿಗೆ ಬಂದಿದ್ದು ಹಲವು ಕಡೆಗಳಲ್ಲಿ ಇದಕ್ಕೆ ಭಾರಿ ವಿರೋಧಗಳು ವ್ಯಕ್ತವಾಗಿವೆ. ಆದರೆ ಪೊಲೀಸರು ಈ ನೂತನ ನಿಯಮಗಳನ್ನು ಜಾರಿಗೆ ತರುವಲ್ಲಿ ಪಣತೊಟ್ಟಂತೆ ತೋರುತ್ತಿದ್ದು ಸಾರ್ವಜನಿಕರ ವಿರೋಧವನ್ನು ಎದುರಿಸುವಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News