ಮಣಿಪಾಲ: ಮಹಿಳೆಯ ಚೈನ್ ಕಳವು

Update: 2019-09-12 15:46 GMT

ಮಣಿಪಾಲ, ಸೆ.12: ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆಂದು ಗುರುವಾರ ಬೆಳಗ್ಗೆ 8:15ರ ಸುಮಾರಿಗೆ ತೆರಳುತಿದ್ದ ಶಿವಳ್ಳಿ ಗ್ರಾಮ ಮಂಚಿಕೋಡಿಯ ಲಲಿತಾ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳೆದ ಬೈಕ್ ಸವಾರ ಪರಾರಿಯಾಗಿದ್ದಾನೆ.

ಲಲಿತಾ ಅವರು ಮಂಚಿಕೋಡಿ ಗದ್ದೆ ಬಳಿ ತಲುಪುತಿದ್ದಂತೆ ಎದುರಿನಿಂದ ಕೆಂಪು ಬಣ್ಣದ ಹೆಲ್ಮೆಟ್ ಧರಿಸಿ, ಕಾಫಿ ಬಣ್ಣದ ರೈನ್‌ಕೋಟ್ ಹಾಕಿಕೊಂಡು ಬರುತಿದ್ದ ಯುವಕನೊಬ್ಬ ಒಮ್ಮೆಲೇ ಅವರ ಬಳಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈಹಾಕಿ ಎಳೆದಿದ್ದು, ಈ ವೇಳೆ ಆತನನ್ನು ತಳ್ಳುವ ಪ್ರಯತ್ನದಲ್ಲಿ ಲಲಿತಾ ಗದ್ದೆಗೆ ಬಿದ್ದಿದ್ದಾರೆ. ಆಗ ಯುವಕ ಗದ್ದೆಗೆ ಬಿದ್ದ ಲಲಿತರ ಬಳಿ ಬಂದು ಪುನಹ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡಿದ್ದು, ಆಗ ಅದರ ಅರ್ಧಭಾಗ ಲಲಿತರ ಕೈಯಲ್ಲಿ ಉಳಿದುಕೊಂಡು ಉಳಿದರ್ಧ ಕಳ್ಳನ ಪಾಲಾಗಿತ್ತು.

ಈ ಸಂದರ್ಭದಲ್ಲಿ ಲಲಿತ ಅವರು ಯುವಕನ ಗುರುತು ಹಿಡಿದಿದ್ದು, ಆತ ಅದೇ ಊರಿನ ಪ್ರವೀಣ ಎಂದು ಗುರುತಿಸಿದ್ದಾರೆ. ಆರೋಪಿ ಎಳೆದೊಯ್ಡ ಚಿನ್ನದ ಸರದ ಮೌಲ್ಯ 9000ರೂ. ಎಂದು ಹೇಳಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News