ಮಂಗಳೂರು: ಇನ್ನೂ ಪತ್ತೆಯಾಗದ ನಿವೃತ್ತ ಬ್ಯಾಂಕ್ ಉದ್ಯೋಗಿ
Update: 2019-09-12 16:24 GMT
ಮಂಗಳೂರು, ಸೆ.12: ನಗರದ ಬಳಿ ಬಿಜೈ ನ್ಯೂ ರೋಡ್ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾಶಿವ ರಾವ್ (64) ಬುಧವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಗುರುವಾರ ರಾತ್ರಿ ತನಕ ಅವರು ಪತ್ತೆಯಾಗಿಲ್ಲ.
ಬೆಳಗ್ಗೆ 6:30ರ ವೇಳೆಗೆ ಯೋಗ ತರಗತಿಗೆಂದು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರ ಹೋಗಿದ್ದರು. ಸುಮಾರು 10 ಗಂಟೆಯಾದರೂ ಮನೆಗೆ ಹಿಂದಿರುಗದಿದ್ದಾಗ ಮನೆಯವರು ಗಾಬರಿಗೊಂಡು ಹುಡುಕಾಟ ಆರಂಭಿಸಿದ್ದರು. ಆಗ ಅವರ ದ್ವಿಚಕ್ರ ವಾಹನ ನೇತ್ರಾವತಿ ಸೇತುವೆಯಿಂದ ಮುಂದಕ್ಕೆ ಕಲ್ಲಾಪು ಬಳಿ ಇರುವುದು ಗಮನಕ್ಕೆ ಬಂದಿದೆ. ಮನೆಯವರು ಅಲ್ಲಿ ಹೋಗಿ ನೋಡಿದಾಗ ದ್ವಿಚಕ್ರ ವಾಹನ ಅವರದ್ದೇ ಎಂದು ದೃಢಪಟ್ಟಿದೆ.
ಅವರು ನೀರಿಗೆ ಹಾರಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಗುರುವಾರವೂ ನದಿಯ ಇಕ್ಕೆಲಗಳಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ತನಿಖೆ ನಡೆಸುತ್ತಿರುವ ಉರ್ವ ಪೊಲೀಸರು ತಿಳಿಸಿದ್ದಾರೆ.