ಮುಹರ್ರಂ-ಗಣೇಶ ಚತುರ್ಥಿ ಆಚರಿಸುತ್ತಿದ್ದವರು ರಸ್ತೆಯಲ್ಲಿ ಪರಸ್ಪರ ಎದುರಾದಾಗ…!
ಹೊಸದಿಲ್ಲಿ, ಸೆ.13: ರಸ್ತೆಯೊಂದರ ವಿರುದ್ಧ ದಿಕ್ಕುಗಳಲ್ಲಿರುವ ಮುಹರ್ರಂ ಮತ್ತು ಗಣೇಶ ಚತುರ್ಥಿ ಆಚರಿಸುತ್ತಿದ್ದವರು ಪರಸ್ಪರ ಕೈಕುಲುಕುತ್ತಾ ಶುಭಾಶಯ ವಿನಿಮಯ ಮಾಡಿಕೊಂಡ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇಂದ್ರಾಡಳಿತ ಪ್ರದೇಶ ದಾದ್ರಾ ನಗರ್ ಹವೇಲಿಯಲ್ಲಿ ನಡೆದ ಈ ಸೌಹಾರ್ದದ ದೃಶ್ಯವನ್ನು ದಾರಿಹೋಕರೊಬ್ಬರು ಸೆರೆಹಿಡಿದಿದ್ದಾರೆ. ಎರಡೂ ಸಮುದಾಯದ ಮಂದಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. “ಈ ಫೋಟೊವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದರು. ನಾನು ಕೂಡ ಸಾಮಾಜಿಕ ಜಾಲತಾಣದಲ್ಲಿ ನನ್ನ ಗೆಳೆಯರೊಂದಿಗೆ ಈ ಫೊಟೊವನ್ನು ಹಂಚಿದ್ದೇನೆ. ಕೆಲ ಗಂಟೆಗಳಲ್ಲೇ ಫೋಟೊ ದೇಶಾದ್ಯಂತ ವೈರಲ್ ಆಗಿತ್ತು. ಈ ಘಟನೆ ನಡೆದಾಗ ನಾನೂ ಸ್ಥಳದಲ್ಲಿದ್ದೆ” ಎಂದು ಆರಿಫ್ ಎಂಬವರು ಪ್ರತಿಕ್ರಿಯಿಸಿದ್ದಾರೆ.
“ಇಲ್ಲಿ ಹಿಂದೂ ಮುಸ್ಲಿಮರ ನಡುವೆ ಉತ್ತಮ ಬಾಂಧವ್ಯವಿದೆ. ನಾವು ಪರಸ್ಪರರ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ನಡುವೆ ಇದುವರೆಗೆ ಒಂದೇ ಒಂದು ಗಲಭೆಯಂತಹ ಘಟನೆಗಳು ನಡೆದಿಲ್ಲ” ಎಂದು ಧರ್ಮೇಶ್ ಪಾಂಡ್ಯ ಎಂಬವರು ಹೇಳುತ್ತಾರೆ.