ಅತ್ಯಾಚಾರಿಗಳಿಂದ ತಪ್ಪಿಸಿ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಿ ಬಂದ ಬಾಲಕಿ

Update: 2019-09-13 16:31 GMT

ಜೈಪುರ, ಸೆ.13: ತನ್ನನ್ನು ಅಪಹರಿಸಿ, ಹಲ್ಲೆ ನಡೆಸಿದ ಬಳಿಕ ಅತ್ಯಾಚಾರ ಎಸಗಿದ ಮೂವರು ವ್ಯಕ್ತಿಗಳಿಂದ ತಪ್ಪಿಸಿಕೊಂಡ ಬಾಲಕಿ ಸುಮಾರು ಅರ್ಧ ಕಿ.ಮೀ ದೂರ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಿ ಬಂದ ಘಟನೆ ರಾಜಸ್ತಾನದ ಭಿಲ್ವಾರಾ ನಗರದಲ್ಲಿ ನಡೆದಿದೆ.

ಗೆಳತಿಯರೊಂದಿಗೆ ದೇವಸ್ಥಾನಕ್ಕೆ ಹೊರಟಿದ್ದ ಬಾಲಕಿಯನ್ನು ಕುಡಿತದ ಅಮಲಿನಲ್ಲಿದ್ದ ಮೂವರು ವ್ಯಕ್ತಿಗಳು ಹಿಂಬಾಲಿಸಿದ್ದಾರೆ. ಇಬ್ಬರು ಬಾಲಕಿಯರು ಓಡಿ ತಪ್ಪಿಸಿಕೊಂಡರೆ ಒಬ್ಬಳು ದುಷ್ಕರ್ಮಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವಳನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ವ್ಯಕ್ತಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಅಷ್ಟರಲ್ಲಿ ತಪ್ಪಿಸಿಕೊಂಡು ಓಡಿದ್ದ ಒಬ್ಬ ಬಾಲಕಿ ಸಮೀಪದ ಮಾರುಕಟ್ಟೆಗೆ ತೆರಳಿ ಅಲ್ಲಿದ್ದ ವ್ಯಾಪಾರಿಯ ನೆರವು ಕೋರಿದ್ದಾಳೆ. ತಕ್ಷಣ ಆತ ಸ್ಥಳಕ್ಕೆ ತೆರಳಿದಾಗ ಮೂವರು ವ್ಯಕ್ತಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದ ಬಾಲಕಿಯನ್ನು ಕಂಡಿದ್ದಾನೆ. ಅಷ್ಟರಲ್ಲಿ ಆ ಮೂವರು ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದು ವ್ಯಾಪಾರಿಯನ್ನು ಕಂಡ ಸಂತ್ರಸ್ತ ಬಾಲಕಿ ಹೆದರಿಕೆಯಿಂದ ಬೆತ್ತಲೆಯಾಗಿಯೇ ಅಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರ ಓಡಿದ್ದಾಳೆ. ಆಕೆಯಲ್ಲಿ ವಿಶ್ವಾಸ ತುಂಬಿ ಆಕೆಯನ್ನು ಸಮಾಧಾನಿಸಿ ತನ್ನ ಬಟ್ಟೆ ನೀಡಿರುವುದಾಗಿ ವ್ಯಾಪಾರಿ ಪೊಲೀಸರಲ್ಲಿ ತಿಳಿಸಿದ್ದಾನೆ.

ಬಳಿಕ ವ್ಯಾಪಾರಿಯ ದೂರಿನ ಆಧಾರದಲ್ಲಿ ಮೂವರು ಆರೋಪಿಗಳಾದ ರಾಜು ಕಹಾರ್, ಕೈಲಾಶ್ ಕಹಾರ್ ಹಾಗೂ ನಾರಾಯಣ್ ಗುರ್ಜಾರ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News