ಪುತ್ತೂರು: ಯಕ್ಷರಂಗದ ದಿಗ್ಗಜ ಚಂದ್ರಶೇಖರ ಹೆಗ್ಡೆ ನಿಧನ

Update: 2019-09-15 12:39 GMT

ಪುತ್ತೂರು: ಯುಕ್ಷಗಾನ ಕಲಾವಿದ ಮೂಲತ: ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಚಂದ್ರಶೇಖರ ಹೆಗ್ಡೆ (59) ಹೃದಯಾಘಾತದಿಂದ ಶನಿವಾರ ಮಧ್ಯರಾತ್ರಿ ನಿಧನರಾದರು.

ಚಂದ್ರ ಶೇಖರ ಹೆಗ್ಡೆ ಅವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ವಾಸ್ತವ್ಯವಿದ್ದು, ಅಲ್ಲಿಯೇ ಮರಣ ಹೊಂದಿದ್ದಾರೆ. ಸುಂಕದಕಟ್ಟೆ ಮೇಳದಲ್ಲಿ ಕಲಾವಿದರಾಗಿ ತನ್ನ ವೃತ್ತಿ ಬದುಕು ಆರಂಭಿಸಿದ ಅವರು ಸುಮಾರು 12 ವರ್ಷಗಳ ಕಾಲ ಧರ್ಮಸ್ಥಳ ಮೇಳದಲಿ ಸೇವೆಗೈದಿದ್ದರು. ವಿಶೇಷವಾಗಿ ಖಳ ನಾಯಕನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅವರು ಯಕ್ಷಗಾನ ಪರಂಪರೆ ಯಲ್ಲಿಯೇ ಬೆಳೆದು ಬಂದವರಾಗಿದ್ದು, ಅವರ ತಂದೆ ನಾರಾಯಣ ಹೆಗ್ಡೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ತನ್ನ ತಂದೆಯ ಜೊತೆಗೆ ಅವರು ಯಕ್ಷಗಾನ ಮೇಳದಲ್ಲಿ ತಿರುಗಾಟ ನಡೆಸುತ್ತಾ ಅವರೊಂದಿಗೆ ಕಲಾವಿದರಾಗಿ ವೇಷ ಮಾಡುತ್ತಿದ್ದರು. ಅವರ ಓರ್ವ ಸಹೋದರ ಗಿರೀಶ್ ಹೆಗ್ಡೆ ಧರ್ಮಸ್ಥಳ ಮೇಳದ ವ್ಯವಸ್ಥಾಪಕ ಹಾಗೂ ಕಲಾವಿದರಾಗಿದ್ದಾರೆ. ಇನ್ನೋರ್ವ ಸಹೋದರ ದೇವರಾಜ ಹೆಗ್ಡೆ ಉಪನ್ಯಾಸಕರಾಗಿದ್ದು ಅವರೂ ಯಕ್ಷಗಾನ ಕಲಾವಿದರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News