×
Ad

ಡಿಸೆಂಬರ್‌ನಲ್ಲಿ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ

Update: 2019-09-15 20:36 IST

ಮಂಗಳೂರು, ಸೆ.15: ತುಳು ಪರಿಷತ್ ಆಶ್ರಯದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ತುಳು ಸಮ್ಮೇಳನವನ್ನು ಡಿಸೆಂಬರ್‌ನಲ್ಲಿ ಮಂಗಳೂರು ಪುರಭವನದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.

ಮಂಗಳೂರು ಹೊಟೇಲ್ ವುಡ್‌ಲ್ಯಾಂಡ್ಸ್ ಸಭಾಂಗಣದಲ್ಲಿ ನಡೆದ ತುಳು ಪರಿಷತ್ ಕೇಂದ್ರೀಯ ಸಮಿತಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾಗಿ ಕಲಾವಿದ, ಸಂಘಟಕ ಸ್ವರ್ಣ ಸುಂದರ್ ಅವರನ್ನು ಆಯ್ಕೆ ಮಾಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಸ್ವರ್ಣ ಸುಂದರ್, ಯುವ ಸಮುದಾಯದಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಮತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ತುಳು ಸಮ್ಮೇಳನವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಲಿದೆ. ತುಳು ಭಾಷಿಗರೆಲ್ಲರೂ ಈ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನ ಸಮಿತಿಯ ಅಧ್ಯಕ್ಷ ಪ್ರಭಾಕರ್ ನೀರುಮಾರ್ಗ ಮಾತನಾಡಿ, ವಿದ್ಯಾರ್ಥಿ ತುಳು ಸಮ್ಮೇಳನವು ಅತ್ಯಂತ ಮೌಲಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.

ತುಳು ಪರಿಷತ್ ಅಧ್ಯಕ್ಷ ಹಾಗೂ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. ಕಾಲೇಜು ವಿದ್ಯಾರ್ಥಿಗಳೇ ಸಮ್ಮೇಳನದ ಗೋಷ್ಠಿ, ಕಾರ್ಯಕ್ರಮಗಳನ್ನು ನಡೆಸಿಕೊಡುವರು ಎಂದು ಮಾಹಿತಿ ನೀಡಿದರು.

ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಮಾತನಾಡಿ, ವಿದ್ಯಾರ್ಥಿ ಸಮ್ಮೇಳನದ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಬದುಕಿನ ಸಂಶೋಧನೆ, ದಾಖಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.

ತುಳು ಪರಿಷತ್ ಉಪಾಧ್ಯಕ್ಷ ಧರಣೇಂದ್ರಕುಮಾರ್, ಪ್ರೊ.ವಿನುತಾ ರೈ, ಮಮತಾ ಡಿ.ಎಸ್.ಗಟ್ಟಿ, ಶಿವಾನಂದ ಕರ್ಕೇರಾ, ಡಾ.ವಾಸುದೇವ ಬೆಳ್ಳೆ, ಪ್ರಶಾಂತ್ ಕಾರಂತ್, ವಾಣಿ ರಾಜಗೋಪಾಲ್, ಪಲ್ಲವಿ ಕಾರಂತ್ ಸಭೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿ ತುಳು ಸಮ್ಮೇಳನದ ವಿವಿಧ ಕಾರ್ಯಕ್ರಮ ಸ್ವರೂಪಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ತುಳು ಪರಿಷತ್ ಸದಸ್ಯರಾದ ಸುಭಾಶ್ಚಂದ್ರ ಕಣ್ವತೀರ್ಥ, ಗೋಪಾಲ್ ಅಂಚನ್, ಅಕ್ಷತಾ ಶೆಟ್ಟಿ, ಶೋಭಾ ಶೆಟ್ಟಿ, ರಮೇಶ್ ಮಂಚಕಲ್, ಬಾಬು ಪಾಂಗಾಳ, ಇಸ್ಮಾಯೀಲ್ ಪೆರಿಂಜೆ, ಸುದರ್ಶನ್, ಅಮಿತಾ ಆಳ್ವ, ಮಣಿ ರೈ, ಅವಿನಾಶ್, ಹರೀಶ್, ವಸಂತ್, ದಿನೇಶ್, ಜಯಲಕ್ಷ್ಮೀ ಶೆಟ್ಟಿ, ಭರತೇಶ್ ಮೊದಲಾದವರು ಭಾಗವಹಿಸಿದ್ದರು.

ಪ್ರಧಾನ ಸಭೆಗೆ ಮೊದಲು ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಸಮಾಲೋಚನಾ ಸಭೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸಮ್ಮೇಳನದ ಕಾರ್ಯಕ್ರಮಗಳ ಸ್ವರೂಪದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ತಮ್ಮ ಕಾಲೇಜುಗಳಲ್ಲಿ ವಿವಿಧ ಗೋಷ್ಠಿ, ಸ್ಪರ್ಧೆಗಳನ್ನು ಆಯೋಜಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News