ತುಳುಚಿತ್ರ ತಡೆಯಾಜ್ಞೆ ನಿಂದನೆ ಪ್ರಕರಣ: ಎರಡು ಫೇಸ್ಬುಕ್ ಖಾತೆಗಳ ಬ್ಲಾಕ್ - ಎಸಿಪಿ
ಮಂಗಳೂರು, ಸೆ.15: ‘ಗಿರಿಗಿಟ್’ ತುಳುಚಿತ್ರದ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ ನ್ಯಾಯವಾದಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟಿದೆ.
ಈಗಾಗಲೇ ಎರಡು ಖಾತೆಗಳನ್ನು ಬ್ಲಾಕ್ ಮಾಡಲಾಗಿದ್ದು, ಇನ್ನಷ್ಟು ಫೇಸ್ಬುಕ್ ಖಾತೆಗಳ ವಿರುದ್ಧ ಕ್ರಮ ಕೈಗೊಂಡು ಆರೋಪಿ ಗಳನ್ನು ತಕ್ಷಣ ಬಂಧಿಸಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಬಂದರು ಠಾಣೆಯಲ್ಲಿ ತಮ್ಮನ್ನು ರವಿವಾರ ಭೇಟಿಯಾದ ವಕೀಲರ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ.
ಈಗಾಗಲೇ ಫೇಸ್ಬುಕ್ನ ಮುಂಬೈ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು, ಎರಡು ಫೇಸ್ಬುಕ್ ಖಾತೆಗಳನ್ನು ಸ್ಥಗಿತಗೊಳಿ ಸಲಾಗಿದೆ. ಇನ್ನಷ್ಟು ಖಾತೆಗಳ ವಿವರವನ್ನು ಕೋರಲಾಗಿದೆ. ಕೆಲವು ಖಾತೆಗಳ ವಿವರ ಈಗಾಗಲೇ ಪೊಲೀಸ್ ಇಲಾಖೆಯ ಕೈ ಸೇರಿದೆ. ವೈಯಕ್ತಿಕವಾಗಿ ಕೆಲ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸೋಮವಾರ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಎಸಿಪಿ ಭಾಸ್ಕರ್ ಭರವಸೆ ನೀಡಿದ್ದಾರೆ.
ವಕೀಲರಿಂದ ಪ್ರತ್ಯೇಕ ದೂರು: ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಮತ್ತು ಶುಕರಾಜ್ ಕೊಟ್ಟಾರಿ ವೈಯಕ್ತಿಕವಾಗಿ ಎರಡು ಪ್ರತ್ಯೇಕ ದೂರುಗಳನ್ನು ನೀಡಿದರು.
‘ಗಿರಿಗಿಟ್’ ಚಿತ್ರದ ವಿರುದ್ಧ ಮಂಗಳೂರಿನ ವಕೀಲರನ್ನು ಪ್ರತಿನಿಧಿಸಿ ಮಂಗಳೂರು ವಕೀಲರ ಸಂಘ ನ್ಯಾಯಾಲಯ ಮೆಟ್ಟಿಲೇರಿತ್ತು. ಈ ಮಧ್ಯೆ, ಗಿರಿಗಿಟ್ ಚಿತ್ರ ತಂಡ ಹಾಗೂ ಚಿತ್ರ ತಂಡದ ಪ್ರಮುಖರು, ಗಣ್ಯರು ವಕೀಲರ ಸಂಘವನ್ನು ಸಂಪರ್ಕಿಸಿ ಆಗಿರುವ ಗೊಂದಲವನ್ನು ಸರಿಪಡಿಸುವ ಭರವಸೆ ನೀಡಲಾಗಿದ್ದು, ವಿವಾದವನ್ನು ಸುಖಾಂತ್ಯಗೊಳಿಸುವಂತೆ ಮನವಿ ಮಾಡಿದ್ದರು ಎಂದು ವಕೀಲರ ಸಂಘದ ನಿಯೋಗದಲ್ಲಿ ಅಧ್ಯಕ್ಷ ಎನ್.ನರಸಿಂಹ ಹೆಗ್ಡೆ ತಿಳಿಸಿದರು.
ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ತಂಡ ಒಪ್ಪಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಚಿತ್ರ ಪ್ರದರ್ಶನ ಮುಂದುವರಿಸು ವಂತೆ ಮನವಿ ಮಾಡಲಾಗಿತ್ತು. ಎಲ್ಲವೂ ಸೌಹಾರ್ದವಾಗಿ ಮುಕ್ತಾಯ ಕಾಣುತ್ತಿರುವ ಹಂತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಕೆಲ ವಕೀಲರನ್ನು ವೈಯಕ್ತಿಕವಾಗಿ ನಿಂದಿಸಿರುವ ಪ್ರಕರಣಗಳು ಮುಂದುವರಿದಿದೆ ಎಂದರು.
ವಕೀಲರ ಸಂಘದ ನಿಯೋಗದಲ್ಲಿ ಅಧ್ಯಕ್ಷ ಎನ್.ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಜಿಲ್ಲಾ ಸರಕಾರಿ ವಕೀಲರಾದ ಮನೋರಾಜ್, ಹಿರಿಯ ವಕೀಲರಾದ ಎಂ.ಪಿ. ನೊರೋನ್ಹಾ, ಸುಮನಾ ಶರಣ್, ಅರುಣಾ ಬಿ.ಪಿ. ಶ್ರೀಧರ್ ಎಣ್ಮಕಜೆ, ಸಂಘದ ಕಾರ್ಯಕಾರಿ ಸಮಿತಿ ಎಲಿಜಬೆತ್ ನೆಲ್ಯಾರ, ಯುವರಾಜ್, ಶುಕರಾಜ್ ಕೊಟ್ಟಾರಿ, ವಿನಯ್ ಕುಮಾರ್, ಪ್ರೇಮ್, ರವಿರಾಜ್, ವಿಜಯ ಕುಮಾರ್, ಪ್ರವೀಣ, ಪ್ರಮೋದ್ ಕೆರ್ವಾಶೆ, ರಾಮಚಂದ್ರ, ಹರೀಶ್, ಅಸ್ಗರ್, ಸುಕೇಶ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಆರೋಪಿಗಳಿಗೆ ವಕಾಲತು ಹಾಕಲ್ಲ: ವಕೀಲರ ಸಂಘ
ವಕೀಲರ ವಿರುದ್ಧ ಅವಹೇಳನಕಾರಿ ಕಮೆಂಟ್ ಹಾಕಿರುವ ಕಿಡಿಗೇಡಿಗಳ ವಿರುದ್ಧ ಮಂಗಳೂರು ವಕೀಲರ ಸಂಘದ ಯಾವ ಸದಸ್ಯರೂ ವಕಾಲತ್ತು ಹಾಕುವುದಿಲ್ಲ. ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವುದಿಲ್ಲ ಎಂದು ಮಂಗಳೂರು ವಕೀಲರ ಸಂಘ ಸ್ಪಷ್ಟಪಡಿಸಿದೆ.
ಅಲ್ಲದೆ, ದ.ಕ. ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಯ ಇತರ ವಕೀಲರ ಸಂಘಕ್ಕೂ ಆರೋಪಿಗಳ ಪರ ವಕಾಲತ್ತು ಹಾಕದಂತೆ ಮನವಿ ಮಾಡಲಾಗುವುದು ಎಂದು ಸಂಘ ತಿಳಿಸಿದೆ.