ಈಶ್ವರಪ್ಪ ಜನಪ್ರತಿನಿಧಿಯಾಗಿರಲು ನಾಲಾಯಕ್ಕು: ರಿಯಾಝ್ ಫರಂಗಿಪೇಟೆ

Update: 2019-09-16 14:55 GMT

ಬೆಂಗಳೂರು, ಸೆ.16: ಮತಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯ ಮತ್ತು ಮಂಗಳಮುಖಿಯರನ್ನು ಅವಮಾನಿಸುಂತಹ ಹೇಳಿಕೆ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪತನ್ನದು ಎಂದೆಂದಿಗೂ ಹೊಲಸು ನಾಲಗೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈ ಮೂಲಕ ತಾನು ಜನಪ್ರತಿನಿಧಿಯಾಗಿರಲು ನಾಲಾಯಕ್ಕು ಎಂಬುದನ್ನು ಧೃಢಪಡಿಸಿರುತ್ತಾರೆ ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಪಕ್ಷದ ಪ್ರತಿಯೊಬ್ಬ ಶಾಸಕರ ಒಂದೊಂದು ಆವಾಂತರವನ್ನು ಗಮನಿಸಿದರೆ ಇದೊಂದು ಅನಿಷ್ಟ ಪಕ್ಷ ಎಂಬುವುದು ಸ್ಪಷ್ಟವಾಗುತ್ತದೆ. ಸ್ವಾಭಿಮಾನದಿಂದ ಬದುಕುತ್ತಿರುವ ತೃತೀಯ ಲಿಂಗಿ ಸಮುದಾಯದ ಬಗ್ಗೆ ಮಾತನಾಡಲು ಬಿಜೆಪಿ ಪಕ್ಷಕ್ಕೆ ಏನು ನೈತಿಕತೆಯಿದೆ ಎಂದು ಪ್ರಶ್ನಿಸಿದ ಅವರು, ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು ಅಥವಾ ಯಾವುದೇ ಅಭ್ಯರ್ಥಿಯು ಯಾವುದೇ ಸಮುದಾಯದ ಮತಗಳನ್ನು ಪಡೆಯಬಹುದು. ಆದರೆ ಇದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಈಶ್ವರಪ್ಪ ಮುಸಲ್ಮಾನರ ಮತ ಪಡೆಯುವ ಶಾಸಕರು ಹಿಜಡಾಗಳು ಎಂಬ ಹೇಳಿಕೆ ನೀಡುವ ಮೂಲಕ ಮತ್ತೆ ತನ್ನ ಮಾನಸಿಕ ಅಸ್ವಸ್ಥತೆಯನ್ನು ಪ್ರದರ್ಶಿಸಿರುತ್ತಾರೆ. ಮಾತೆತ್ತಿದರೆ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನ ಮಾಡುವ, ಪಾಕಿಸ್ತಾನಕ್ಕೆ ಸಂಬಂಧ ಕಲ್ಪಿಸುವ ಮತ್ತು ಸುಳ್ಳು ಪ್ರಚಾರ ಮಾಡುವ ಈಶ್ವರಪ್ಪರ ಈ ಚಾಳಿಯ ವಿರುದ್ಧ ಎಸ್‌ಡಿಪಿಐ ಪಕ್ಷವು ಮಾನನಷ್ಟ ಮೊಕದ್ದಮೆ ದಾಖಲಿಸುವುದರ ಮೂಲಕ ಕಾನೂನು ಹೋರಾಟವನ್ನು ನಡೆಸಲಿದೆ. ಮಂಗಳಮುಖಿಯರು ಈಶ್ವರಪ್ಪರ ವಿರುದ್ಧ ಕಾನೂನು ಹೋರಾಟ ಮಾಡುವುದಾದರೆ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News