ಗಾಂಜಾ ಮಾರಾಟ: ಮೂವರು ಆರೋಪಿಗಳ ಸೆರೆ

Update: 2019-09-16 16:00 GMT

ಮಂಗಳೂರು, ಸೆ.16: ಮಾದಕ ದ್ರವ್ಯ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳ ಹಾಗೂ ಪಣಂಬೂರು ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಟಿಪಳ್ಳ ಕೃಷ್ಣಾಪುರದ 8ನೇ ಬ್ಲಾಕ್ ನಿವಾಸಿ  ಮುಹಮ್ಮದ್ ಅಪ್ರಿದ್ (19), 7ನೇ ಬ್ಲಾಕ್ ನಿವಾಸಿಗಳಾದ ಮುಹಮ್ಮದ್ ಹನೀಫ್ ಯಾನೆ ಅಂಪು (19), ಮೌಶುಕ್ ಯಾನೆ ಮುಝೈನ್ (20) ಬಂಧಿತ ಆರೋಪಿಗಳು.

ಬೈಕಂಪಾಡಿ ಗ್ರಾಮದ ಮೀನಕಳಿಯ ಕಾಂಕ್ರಿಟ್ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಮೋಟಾರ್ ಸೈಕಲಿನಲ್ಲಿ ಆಗಮಿಸಿದ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸೊತ್ತನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 15,500 ರೂ. ಮೌಲ್ಯದ 310 ಗ್ರಾಂ ಗಾಂಜಾ, 7,500 ರೂ. ಮೌಲ್ಯದ ಮೂರು ಮೊಬೈಲ್‌ , 20 ಸಾವಿರ ರೂ. ಮೌಲ್ಯದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೋ ಬೈಕ್ ಮತ್ತು 800 ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಕ್ಷು ಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮಿಗಣೇಶ್ ಹಾಗೂ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅಝ್ಮತ್ ಅಲಿ ಹಾಗೂ ಪಣಂಬೂರು ಪೊಲೀಸ್ ಉಪ ನಿರೀಕ್ಷಕರಾದ ಉಮೇಶ್‌ಕುಮಾರ್ ಎಂ.ಎನ್. ಮತ್ತು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ/ಸಿಬ್ಬಂದಿ ಮುಹಮ್ಮದ್, ಕುಶಲ ಮಣಿಯಾಣಿ, ವಿಜಯ್ ಕಾಂಚನ್, ಸತೀಶ್ ಎಂ., ಇಸಾಕ್ ಅಹ್ಮದ್, ಶರಣ್ ಕಾಳಿ ಹಾಗೂ ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News