ತೈಲ ಸೋರಿಕೆ ನಿರ್ವಹಣೆ: ಎಚ್ಚರ ವಹಿಸಲು ದ.ಕ. ಡಿಸಿ ಸೂಚನೆ

Update: 2019-09-17 14:01 GMT

ಮಂಗಳೂರು, ಸೆ.17: ನವಮಂಗಳೂರು ಬಂದರಿಗೆ ವಿದೇಶಗಳಿಂದ ಸಾಕಷ್ಟು ತೈಲ ಹೊತ್ತ ನೌಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಯಾವುದೇ ರೀತಿಯ ತೈಲ ಸೋರಿಕೆಯಾದರೆ ಅದರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.

ಕೋಸ್ಟ್ ಗಾರ್ಡ್ ವತಿಯಿಂದ ಪಣಂಬೂರು ಕೋಸ್ಟ್ಗಾರ್ಡ್ ಕಚೇರಿಯಲ್ಲಿ ಮಾಲಿನ್ಯ ನಿಯಂತ್ರಣ ಕುರಿತು ಮಂಗಳವಾರ ನಡೆದ ರಾಜ್ಯ ಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ದ.ಕ. ಜಿಲ್ಲಾ ತೈಲ ಸೋರಿಕೆ ವಿಪತ್ತು ನಿರ್ವಹಣಾ ಯೋಜನೆಯ ಪುಸ್ತಕ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ತೈಲ ಸೋರಿಕೆಯು ದೊಡ್ಡ ವಿಪತ್ತಾಗಿದೆ. ಈ ಬಗ್ಗೆ ಸಾಕಷ್ಟು ಶಾಸನಗಳಿದ್ದರೂ ಮಾಹಿತಿ ಇಲ್ಲದಿರುವುದರಿಂದ, ಪರಸ್ಪರ ಸಂವಹನ ಕೊರತೆಯಾಗಿ ತುರ್ತು ಸಂದರ್ಭ ಸಾಕಷ್ಟು ಸಮಸ್ಯೆಯಾಗುವ ಸಾಧ್ಯತೆಗಳಿರುತ್ತವೆ. ತೈಲ ಸೋರಿಕೆಯಾದರೆ ಸಾಕಷ್ಟು ಪರಿಸರ ಸಂಬಂಧಿ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಂತಹ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಈ ಯೋಜನಾ ಪುಸ್ತಕವನ್ನು ಹೊರತಂದಿದೆ ಎಂದರು.

ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಮಳೆ ಬಂದು ನೆರೆ ಪ್ರವಾಹ, ಭೂಕುಸಿತ ಉಂಟಾದಾಗ ಜಿಲ್ಲಾಡಳಿತವು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳನ್ನು ನಿರ್ವಹಿಸಲು ಜಿಲ್ಲಾಡಳಿತವು ನಿರಂತರ ಕ್ರಮಗಳನ್ನು ನಡೆಸಲಿದೆ ಎಂದು ಸಿಂಧೂ ರೂಪೇಶ್ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಮುದ್ರ ಮಧ್ಯದಲ್ಲಿಯೇ ನೌಕೆ, ಬೋಟುಗಳು ತಾಂತ್ರಿಕ ಸಮಸ್ಯೆಗಳಿಂದ ಅಥವಾ ಪ್ರಾಕೃತಿಕ ಕಾರಣಗಳಿಂದ ಸಂಚಾರ ನಿಲ್ಲಿಸಿ ಶಾಶ್ವತವಾಗಿ ಅಲ್ಲಿಯೇ ಮುಳುಗಿ ಹೋಗುವ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಇಂತಹ ಪ್ರಕರಣಗಳನ್ನು ಶಾಸನಬದ್ಧವಾಗಿ ನಿರ್ವಹಿಸಲು ನಿಯಮ ಜಾರಿಗೆ ತರಬೇಕಾದ ಅಗತ್ಯವಿದೆ ಎಂದ ಜಿಲ್ಲಾಧಿಕಾರಿ ನುಡಿದರು.

ಕೋಸ್ಟ್ಗಾರ್ಡ್ ಡಿಐಜಿ ಎಸ್.ಎಸ್. ದಸೀಲಾ ಮಾತನಾಡಿ ಸಮುದ್ರದಲ್ಲಿ ತೈಲ ಸೋರಿಕೆಯಂತಹ ಘಟನೆಗಳ ಸಂದರ್ಭ ಕೋಸ್ಟ್ಗಾರ್ಡ್ ನೋಡಲ್ ಏಜನ್ಸಿಯಾಗಿದೆ. ಮೂರು ಹಂತದಲ್ಲಿ ಇಂತಹ ಘಟನೆಗಳನ್ನು ನಿರ್ವಹಿಸಲಾಗುತ್ತದೆ. ತೈಲ ಸೋರಿಕೆಯನ್ನು ತಡೆಯಲಾಗಿದಿದ್ದರೂ ಅಂತಹ ಘಟನೆಗಳ ಸಂದರ್ಭ ಪರಿಸ್ಥಿತಿ ನಿರ್ವಹಣೆ ಮುಖ್ಯವಾಗಿದೆ. ಇದಕ್ಕಾಗಿ ಉತ್ಕೃಷ್ಟ ಮಟ್ಟದ ಪೂರ್ವಸಿದ್ಧತೆ ಅಗತ್ಯವಿದೆ ಎಂದರು.

ಕರಾವಳಿ ತಟ ರಕ್ಷಣೆಯಲ್ಲಿ ಎನ್‌ಎಂಪಿಟಿಯಲ್ಲಿರುವ 3ನೇ ಕೋಸ್ಟ್‌ಗಾರ್ಡ್ ಜಿಲ್ಲಾ ಘಟಕವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ರೀತಿಯ ನೌಕೆ, ಬೋಟು, ಉಪಕರಣಗಳೊಂದಿಗೆ ಸುಸಜ್ಜಿತವಾಗಿದೆ. ಸಮುದ್ರದಲ್ಲಿ ನಡೆಯುವ ಮಾನವ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದ ದಸೀಲಾ, ಈಗಾಗಲೇ ಮೀನುಗಾರಿಕಾ ಇಲಾಖೆಯ ನೆರವಿನೊಂದಿಗೆ ಜಿಲ್ಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಬೋಟು, ನಾಡದೋಣಿಗಳಿಗೆ ಕಲರ್ ಕೋಡ್ ಅಳವಡಿಸಲಾಗಿದೆ ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯಕುಮಾರ್ ತೈಲ ಸೋರಿಕೆ ವಿಪತ್ತು ನಿರ್ವಹಣೆ ಪುಸ್ತಕದ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಯಪ್ರಕಾಶ್ ನಾಯಕ್, ಸಿಎಂಎಫ್‌ಆರ್‌ಐ ವಿಜ್ಞಾನಿ ಡಾ. ಬಿಂದು ಸುಲೋಚನಾ, ಎನ್‌ಐಟಿಕೆ. ಉಪನ್ಯಾಸಕ ಡಾ. ರಾಜ್‌ಮೋಹನ್ ಮಾಲಿನ್ಯ ವಿಷಯಗಳ ಕುರಿತು ಮಾತನಾಡಿದರು.

ಕೋಸ್ಟ್ಗಾರ್ಡ್ ಉಪಕಮಾಂಡೆಂಟ್ ರಾಜ್‌ಕುಮಾರ್ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News