ಕುಕ್ಕಿಕಟ್ಟೆ: ದಾರಿದೀಪ ಸಮಸ್ಯೆ ವಿರೋಧಿಸಿ ವಿಶಿಷ್ಟ ಪ್ರತಿಭಟನೆ
Update: 2019-09-17 16:38 GMT
ಉಡುಪಿ, ಸೆ.17: ಉಡುಪಿ ನಗರಸಭೆ ವ್ಯಾಪ್ತಿಯ ಕುಕ್ಕಿಕಟ್ಟೆ ಅಯ್ಯಪ್ಪ ಮಂದಿರ ಸಮೀಪ ದಾರಿದೀಪದ ಸಮಸ್ಯೆಯನ್ನು ವಿರೋಧಿಸಿ ಸ್ಥಳೀಯರು ಇಂದು ವಿದ್ಯುತ್ ಕಂಬಕ್ಕೆ ಗ್ಯಾಸ್ಲೈಟ್ ನೇತು ಹಾಕುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ಸಮಯದಿಂದ ಇಲ್ಲಿನ ದಾರಿದೀಪ ಉರಿಯದ ಪರಿಣಾಮ ಸ್ಥಳೀಯರು ತೀರಾ ತೊಂದರೆ ಪಡುತ್ತಿದ್ದರು. ಈ ಬಗ್ಗೆ ಸಂಬಂಧ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ‘ಸಾರ್ವಜನಿಕ ಅನುಕೂಲಕ್ಕಾಗಿ ಗ್ಯಾಸ್ ದೀಪದ ವ್ಯವಸ್ಥೆ ಮಾಡಲಾಗಿದೆ’ ಎಂಬ ಬರಹದೊಂದಿಗೆ ಗ್ಯಾಸ್ಲೈಟ್ನ್ನು ವಿದ್ಯುತ್ ಕಂಬಕ್ಕೆ ನೇತು ಹಾಕಿದ್ದಾರೆ.
ಈ ವಿಶಿಷ್ಟ ಪ್ರತಿಭಟನೆಯಿಂದ ಎಚ್ಚೆತ್ತಕೊಂಡ ನಗರಸಭೆ ಸಿಬ್ಬಂದಿಗಳು ಸಂಜೆ ವೇಳೆ ಸ್ಥಳಕ್ಕೆ ಆಗಮಿಸಿ ದಾರಿದೀಪವನ್ನು ದುರಸ್ತಿ ಮಾಡಿ ಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.