ಮಣಿಪಾಲ: ಬಿಜೆಪಿಯಿಂದ ನಾಳೆ ಜನಜಾಗೃತಿ ಸಭೆ
ಉಡುಪಿ, ಸೆ.20: ರಾಷ್ಟ್ರೀಯ ಏಕತಾ ಅಭಿಯಾನ ‘ಒಂದು ದೇಶ ಒಂದು ಸಂವಿಧಾನ’ದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ನಾಳೆ ಸಂಜೆ 4:30ಕ್ಕೆ ಮಣಿಪಾಲದ ಹೊಟೇಲ್ ಕಂಟ್ರಿ ಇನ್ನಲ್ಲಿ ‘370ನೇ ವಿಧಿ ರದ್ಧತಿ ಬಗ್ಗೆ’ ಜನಜಾಗೃತಿ ಸಭೆಯನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದು, ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಈ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ಹಾಗೂ ಜಿಲ್ಲೆಯ ಐದು ಮಂಡಲಗಳ ಮಟ್ಟದಲ್ಲಿ ನಡೆಯಲಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆ.30ರವರೆಗೆ ಸ್ವಚ್ಚತಾ ಅಭಿಯಾನ, ವೈದ್ಯಕೀಯ ಶಿಬಿರ ಹಾಗೂ ಇನ್ನಿತರ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರಭಾಕರ ಪೂಜಾರಿ, ಪೂರ್ಣಿಮಾ ಸುರೇಶ್ ನಾಯಕ್, ಸಾಣೂರು ನರಸಿಂಹ ಕಾಮತ್, ಎ.ಶಿವಕುಮಾರ್ ಉಪಸ್ಥಿತರಿದ್ದರು.