ಕಟೀಲು ಬ್ರಹ್ಮಕಲಶೋತ್ಸವ: ಕಾಮಗಾರಿ ಶೀಘ್ರ ಪೂರ್ಣಗೊಳಿಸಿ; ಸಂಸದ ನಳಿನ್‌ ಕುಮಾರ್ ಕಟೀಲ್ ಸೂಚನೆ

Update: 2019-09-20 15:27 GMT

ಮಂಗಳೂರು, ಸೆ.20: ಕಟೀಲು ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕಾಮಗಾರಿ ಹಾಗೂ ಇತರ ಕೆಲಸಗಳನ್ನು ಎರಡು ತಿಂಗಳೊಳಗೆ ಸಂಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಂಸದ ನಳಿನ್‌ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಬ್ರಹ್ಮಕಲಶೋತ್ಸವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದರು, ರಸ್ತೆ ಅಗಲೀಕರಣಕ್ಕೆ ಅಂದಾಜು ಮಾಡುವಾಗ ಕಾಂಕ್ರಿಟ್ ಹಾಗೂ ಡಾಂಬರೀಕರಣ ರಸ್ತೆ ಮಾದರಿ ತೆಗೆದುಕೊಂಡು ನಂತರ ಅದರಲ್ಲಿ ಒಂದು ಮಾದರಿಯನ್ನು ಆಯ್ದುಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿದರು.

ಬೈಪಾಸ್ ರಸ್ತೆಯಾಗಿ ಉಲ್ಲಂಜೆ- ಮಿತ್ತಬೈಲು- ಪುಪಾಡಿಕಲ್ಲು- ಕೊಂಡೇಲದಿಂದ ಪದವಿ ಕಾಲೇಜು ಮಾರ್ಗವಾಗಿ ರಸ್ತೆ ನಿರ್ಮಿಸಬೇಕು. ರಸ್ತೆ ಅಗಲೀಕರಣ ಸಂದರ್ಭ ಇರುವ ರಸ್ತೆಗಿಂತ 20 ಅಡಿ ಅಗಲೀಕರಣ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಬ್ರಹ್ಮಕಲಶೋತ್ಸವ ಸಂದರ್ಭ ಪಾರ್ಕಿಂಗ್ ವ್ಯವಸ್ಥೆಗೆ ಜಾಗದ ಮಾಲಕರಿಂದ ಒಪ್ಪಿಗೆ ಪತ್ರ ಪಡೆಯಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಶಾಸಕ ಉಮಾನಾಥ ಕೋಟ್ಯಾನ್, ಜಿಪಂ ಸಿಇಒ ಡಾ.ಆರ್. ಸೆಲ್ವಮಣಿ, ಸಹಾಯಕ ಆಯುಕ್ತ ರವಿಚಂದ್ರ ನಾಯ್ಕಾ ಹಾಗೂ ಕಟೀಲ್ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಸಿಬ್ದಂದಿ ಉಪಸ್ಥಿತರಿದ್ದರು.

ನಿಯಮದ ಪ್ರಕಾರವೇ ಅಂಗಡಿಗಳಿಗೆ ಪರವಾನಿಗೆ ನೀಡಬೇಕು. ನಿಯಮ ಪಾಲಿಸದೆ ಇರುವವರಿಗೆ ಒಂದು ವಾರದ ಸಮಯ ನೀಡಬೇಕು. ನಂತರವೂ ಪಾಲಿಸದೆ ಇದ್ದಲ್ಲಿ ಅಂತಹ ಅಂಗಡಿಯ ಪರವಾನಿಗೆ ರದ್ದುಗೊಳಿಸಬೇಕು.
- ಕೋಟ ಶ್ರೀನಿವಾಸ ಪೂಜಾರಿ,ದ.ಕ. ಜಿಲ್ಲಾ ಉಸ್ತುವಾರಿ ಸಚಿವ
---

ಬ್ರಹ್ಮಕಲಶಕ್ಕೆ ಐದು ಕೋಟಿ ಅನುಮೋದನೆ: ಡಿಸಿ
ಕಟೀಲು ಬ್ರಹ್ಮ ಕಲಶೋತ್ಸವಕ್ಕೆ ಐದು ಕೋಟಿ ರೂ. ಅನುದಾನ ನೀಡಲು ಸರಕಾರವು ದೇವಾಲಯದ ಆಡಳಿತ ಮಂಡಳಿಗೆ ಅನುಮೋದನೆ ನೀಡಿದೆ. ಕಟೀಲು ಕ್ಷೇತ್ರಕ್ಕೆ ರವಿವಾರ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News