ಎಸ್ಡಿಪಿಐಯಿಂದ ಸೈನಿಕರಿಗೆ ಅವಮಾನ ಆರೋಪ: ಉಪ್ಪಿನಂಗಡಿಯಲ್ಲಿ ಪೊಲೀಸ್ ದೂರು
Update: 2019-09-20 16:51 GMT
ಉಪ್ಪಿನಂಗಡಿ: ಎಸ್ಡಿಪಿಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ಸೈನಿಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ಭಾರತೀಯ ಸೈನಿಕರ ಮತ್ತು ಸೈನ್ಯದ ವ್ಯವಸ್ಥೆಯನ್ನು ಅವಮಾನಿಸುವ ಮೂಲಕ ದೇಶದ್ರೋಹದ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಾಬಿರ್ ಅರಿಯಡ್ಕ, ಸಿದ್ದೀಕ್ ಮತ್ತು ಪ್ರತಿಭಟನೆ ಆಯೋಜಿಸಿದ ಮುಖಂಡರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ದೂರು ನೀಡಿದ ನಿಯೋಗದಲ್ಲಿ ಬಜರಂಗದಳದ ದ.ಕ. ಜಿಲ್ಲಾ ಗೋ ರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ವಿಎಚ್ಪಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಸಂದೀಪ್ ಕುಪ್ಪೆಟ್ಟಿ, ಸಂಚಾಲಕ ಚಿದಾನಂದ ಪೆರಿಯಡ್ಕ, ಪ್ರಮುಖರಾದ ರವಿ ಇಳಂತಿಲ, ತಿಮ್ಮಪ್ಪ ಇಳಂತಿಲ ಮತ್ತಿತ್ತರರು ಇದ್ದರು.