ಅನಂತನಗರ ಬಸ್ ನಿಲ್ದಾಣದ ಎದುರು ಅಡ್ಡಲಾಗಿ ಹಾಕಿರುವ ಟವರ್ ತೆರವಿಗೆ ಒತ್ತಾಯ
Update: 2019-09-21 15:59 GMT
ಮಣಿಪಾಲ, ಸೆ.21: ಅನಂತನಗರ ಬಸ್ ನಿಲ್ದಾಣದ ಎದುರು ಹಲವು ಸಮಯಗಳ ಹಿಂದೆ ಹೈಮಾಸ್ಟ್ ಟವರ್ ಹಾಗೂ ಸಿಸಿ ಕ್ಯಾಮೆರಾ ಟವರನ್ನು ಅಡ್ಡಲಾಗಿ ಹಾಕಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಟವರ್ನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಣಿಪಾಲ ಸಿಂಡಿಕೇಟ್ ಸರ್ಕಲ್ನಲ್ಲಿ ಅಳವಡಿಸಲಾದ ಪೊಲೀಸ್ ಇಲಾಖೆಯ ಸಿಸಿ ಕ್ಯಾಮರಾದ ಟವರ್ ಹಾಗೂ ನಗರಸಭೆಯು ಅಳವಡಿಸಿದ ಹೈಮಾಸ್ಟ್ ದೀಪದ ಟವರ್ನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ತೆಗೆದು, ಅನಂತನಗರ ಬಸ್ ನಿಲ್ದಾಣ ಎದುರು ಅಡ್ಡಲಾಗಿ ಹಾಕಲಾಗಿದೆ.
ಇದರಿಂದ ನಿಲ್ದಾಣದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಬಸ್ ಹತ್ತಲು ಹೋಗಲು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಆದುದರಿಂದ ಸಂಬಂಧ ಪಟ್ಟವರು ಕೂಡಲೇ ಈ ಟವರುಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೀಶ್ರಾಜ್ ಸರಳಬೆಟ್ಟು ಒತ್ತಾಯಿಸಿದ್ದಾರೆ.