ಮೈಸೂರು ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟ

Update: 2019-09-22 15:33 GMT

ಉಡುಪಿ, ಸೆ.22: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಜ್ಜರ ಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮೈಸೂರು ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟದ ಫುಟ್ಬಾಲ್ ನಲ್ಲಿ ಕೊಡಗು ಜಿಲ್ಲಾ ತಂಡ ಪ್ರಥಮ ಹಾಗೂ ಉಡುಪಿ ಜಿಲ್ಲಾ ತಂಡ ದ್ವಿತೀಯ ಪ್ರಶಸ್ತಿಯನ್ನು ಗೆದ್ದು ಕೊಂಡಿತು.

ಲಾನ್ ಟೆನ್ನಿಸ್ ಪುರುಷರ ವಿಭಾಗದಲ್ಲಿ ಮೈಸೂರು ಪ್ರಥಮ ಹಾಗೂ ಉಡುಪಿ ದ್ವಿತೀಯ ಮತ್ತು ಪುರುಷರ ವಿಭಾಗದಲ್ಲಿ ಮೈಸೂರು ಪ್ರಥಮ ಹಾಗೂ ಹಾಸನ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಅದೇ ರೀತಿ ಈಜು, ವುಷು, ಬಾಕ್ಸಿಂಗ್‌ಗಳು ಕೂಡ ನಡೆದವು. ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡ ಹಾಗೂ ಕ್ರೀಡಾಪಟುಗಳು ರಾಜ್ಯಮಟ್ಟದ ದರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮವನ್ನು ರವಿವಾರ ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತರಬೇತುದಾರರಾದ ರಾಮಚಂದ್ರ ಪಾಟ್ಕರ್, ಜಗದೀಶ್ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಂಜೆ ಬಹುಮಾನವನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News