ಪತ್ರಕರ್ತರಿಗೆ ದೆವ್ವ ಹಿಡಿದಿದೆ ಎಂದ ಬಿಜೆಪಿ ಶಾಸಕ
ಹೊಸದಿಲ್ಲಿ,ಸೆ.22: ತನ್ನ ಕಚೇರಿಯಲ್ಲಿ ಮುಸುಕುಧಾರಿ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದೇವೆ ಎಂದು ಆರೋಪಿಸಿರುವ ಇಬ್ಬರು ಪತ್ರಕರ್ತರ ದೇಹದೊಳಗೆ ಜಿನ್ ಆವಾಹನೆಯಾಗಿದೆ ಎಂದು ಉತ್ತರ ಪ್ರದೇಶದ ಗಾಝಿಯಾಬಾದ್ನ ಲೋನಿಯ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಹೇಳಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ತಾವು ಶಾಸಕರ ಕಚೇರಿಯಲ್ಲಿ ಬೆಳಿಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಅಧಿಕಾರಿಯೊಬ್ಬರಿಗೆ ಕಾಯುತ್ತಿದ್ದ ಸಂದರ್ಭದಲ್ಲಿ ನಮ್ಮ ಮೇಲೆ ಮುಸುಕುಧಾರಿ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಇಬ್ಬರು ಪತ್ರಕರ್ತರು ದೂರು ದಾಖಲಿಸಿದ್ದಾರೆ. ಅದರಂತೆ ಎಫ್ಐಆರ್ ದಾಖಲಿಸಲಾಗಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಲೋನಿಯಲ್ಲಿ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯ ಚಿತ್ರೀಕರಣ ನಡೆಸಲು ತೆರಳಿದ್ದ ಸಂದರ್ಭ ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆಯಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಲು ಪತ್ರಕರ್ತರಾದ ಸರ್ತಾಜ್ ಖಾನ್ ಮತ್ತು ಶೌಕತ್ ಅಲಿ ಬಿಜೆಪಿ ಶಾಸಕರ ಕಚೇರಿಗೆ ತೆರಳಿದ್ದರು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ, ಪತ್ರಕರ್ತರಿಗೆ ದೆವ್ವ ಹಿಡಿದ ಕಾರಣ ಅವರು ಪರಸ್ಪರರ ಮೇಲೆ ಹಲ್ಲೆ ನಡೆಸಿದ್ದಾರೆ. ಯಾರೂ ಅವರಿಗೆ ಹಲ್ಲೆ ನಡೆಸಿಲ್ಲ. ಅವರಿಗೆ ಫಿಟ್ಸ್ ಆಗಿರುವ ಸಾಧ್ಯತೆಯೂ ಇದೆ. ನಮ್ಮ ಕಚೇರಿಯಲ್ಲಿ ಪ್ರೇತಬಾಧೆಯಿದೆಯೇ ಎನ್ನುವುದನ್ನು ಪರಿಶೀಲಿಸಲು ನಾವು ಮೌಲ್ವಿಯನ್ನು ಕರೆಸಿದ್ದೆವು ಎಂದು ತಿಳಿಸಿದ್ದಾರೆ.