ವಿಟ್ಲ ನಾಡಕಚೇರಿ: ಆಧಾರ್ ನೋಂದಣಿಗೆ ವರ್ಷದ ಟೋಕನ್!

Update: 2019-09-23 05:12 GMT

ವಿಟ್ಲ, ಸೆ.22: ಬಂಟ್ವಾಳ ತಾಲೂಕಿನದೇ ಗ್ರಾಮೀಣ ಭಾಗವಾಗಿರುವ ವಿಟ್ಲದಲ್ಲಿ ಕಾರ್ಯಾಚರಿಸುತ್ತಿರುವ ನಾಡಕಚೇರಿಯು ಅವ್ಯವಸ್ಥೆಯಿಂದ ಕೂಡಿದೆ. ಸಮರ್ಪಕ ನಿರ್ವಹಣೆಯಿಲ್ಲದ ದಾಖಲೆ ಪಡೆದುಕೊಳ್ಳಲು ಸಾರ್ವಜನಿಕರು ಪರದಾಟ ಅನುಭವಿಸಬೇಕಾಗಿದೆ.

ಕುಸಿದು ಬೀಳುವ ಹಂತದಲ್ಲಿರುವ ನಾದುರಸ್ತಿ ಕಟ್ಟಡದಲ್ಲಿ ಒಂದೇ ಕಡೆ ಹಲವು ನಾಗರಿಕ ಸೇವೆಗಳ ಕೇಂದ್ರಗಳು ಬೀಡುಬಿಟ್ಟಿದೆ. ಅದಲ್ಲದೆ, ಕಚೇರಿು ಹೊರಭಾಗದಲ್ಲಿ ಕಸದ ರಾಶಿ ಹಾಕಲಾಗಿದೆ. ಸಾರ್ವಜನಿಕರು ನಾಡಕಚೇರಿಗೆ ಮುಂಭಾಗದಲ್ಲಿ ಬಂದರೆ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲ. ಆಧಾರ್ ಕೇಂದ್ರದಲ್ಲಿ ಜನ ಸಾಲು ನಿಲ್ಲುವ ಪಕ್ಕದಲ್ಲೇ ಶೌಚಾಲಯವಿದ್ದು, ಕಚೇರಿ ಕಟ್ಟಡಕ್ಕೆ ತೆರಳಲು ಸಮರ್ಪಕ ದಾರಿ ವ್ಯವಸ್ಥೆಯೂ ಇಲ್ಲ ಎಂಬುವುದು ಸಾರ್ವಜನಿಕರ ಆರೋಪ.

ಆಧಾರ್ ನೋಂದಣಿಗೆ ವರ್ಷದ ಟೋಕನ್: 

ವಿಟ್ಲ ನಾಡಕಚೇರಿಯಲ್ಲಿರುವ ಆಧಾರ್ ಕೇಂದ್ರದಲ್ಲಿ ಆಧಾರ್ ನೋಂದಣಿ ಅಥವಾ ತಿದ್ದುಪಡಿಗಾಗಿ ಒಂದು ವರ್ಷದ ಟೋಕನ್‌ಗಳನ್ನು ಒಂದೇ ಬಾರಿಗೆ ನೀಡಲಾಗಿದೆ. ತುರ್ತು ಕಾರ್ಯಗಳಿಗೆ ಆಧಾರ್ ನೋಂದಣಿ ಅಥವಾ ತಿದ್ದುಪಡಿಗೆ ಬರುವವರಿಗೆ ಟೋಕನ್ ನೆಪದಲ್ಲಿ ತೊಂದರೆ ಅನುಭವಿಸುವಂತಾಗಿದೆ. ವರ್ಷ ಪೂರ್ತಿಯ ಟೋಕನ್ ಏಕಕಾಲದಲ್ಲಿ ನೀಡಲಾಗುತ್ತಿರುವುದರಿಂದ ಆಧಾರ್ ಕಾರ್ಡ್ ನೋಂದಣಿ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸುತ್ತಾರೆ.

ಕಚೇರಿಗೆ ಸೂಕ್ತ ಕಾಯಕಲ್ಪ ಒದಗಿಸಿ: ದೂರದ ಹಳ್ಳಿಗಳಿಂದ ಬರುವ ಜನ ಬೆಳಗ್ಗೆಯಿಂದಲೇ ನಾಡ ಕಚೇರಿ ಮುಂದೆ ಸಾಲುಗಟ್ಟಿ ನಿಂತರೂ ಬೇಕಾದ ಸೌಲಭ್ಯ ದೊರಕದಾಗಿದೆ. ಬೇಸಾಯದ ಕೆಲಸ ಕಾರ್ಯ ಬಿಟ್ಟು ಬಂದರೆ ಫಲ ಸಿಗದೆ ಮತ್ತೆ ಊರಿಗೆ ಕೆಲಸವಾಗದೆ ಬರಿಗೈಲಿ ತೆರಬೇಕಾದ ಪರಿಸ್ಥಿತಿ ಜನರಿಗೆ ಬಂದಿದೆ. ಜೊತೆಗೆ ಬಡವರು ಅಂದಿನ ದಿನಗೂಲಿ ಬಿಟ್ಟು ಅಲೆಯುವಂತಾಗಿದೆ. ಒಟ್ಟಿನಲ್ಲಿ ವಿಟ್ಲ ನಾಡಕಚೇರಿ ಅವ್ಯವಸ್ಥೆಯ ಪರಿಣಮಿಸಿದ್ದು, ಜನ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೋ ಇಲ್ಲಿನ ಕಚೇರಿಗೆ ಸೂಕ್ತ ಕಾಯಕಲ್ಪಒದಗಿಸಿ ಇಲ್ಲವೇ ಇಲ್ಲಿನ ಸರಕಾರಿ ಕಚೇರಿಗಳನ್ನೂ ಬಿ.ಸಿ.ರೋಡ್ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿ ಜನರಿಗೆ ಸಮರ್ಪಕ ಸೇವೆ ಒದಗಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.


ದಿನಕ್ಕೆ 40ಕ್ಕೂ ಹೆಚ್ಚು ಆಧಾರ್ ಕಾರ್ಡ್ ಟೋಕನ್ ನೀಡಲಾಗುತ್ತಿದೆ. ಅದೇ ರೀತಿ ಟೋಕನ್‌ಗಾಗಿ ಬಂದ ಎಲ್ಲರಿಗೂ ಟೋಕನ್ ನೀಡಲಾಗುತ್ತಿದೆ. ಇದೀಗ 2020ರ ಜನವರಿ ತಿಂಗಳ ಭರ್ತಿಯಾಗಿದೆ. ಆದರೆ, ಸಾರ್ವಜನಿಕರಿಗೆ ತುರ್ತು ಕಾರ್ಯಗಳಿಗೆ ಆಧಾರ್ ನೋಂದಣಿ ಅಥವಾ ತಿದ್ದುಪಡಿ ಮಾಡಿಕೊಡಲಾಗುತ್ತಿದೆ.

-ರವಿಶಂಕರ್, ಉಪ ತಹಶೀಲ್ದಾರ್ ವಿಟ್ಲ


2020ರ ಜನವರಿಯ ಟೋಕನ್ ಭರ್ತಿ
2020ರ ಜನವರಿ 31ರವರೆಗಿನ ಆಧಾರ್ ಕಾರ್ಡ್ ಟೋಕನ್‌ಗಳು ಭರ್ತಿಯಾಗಿವೆ. ಮುಂದಿನ ಆಧಾರ್ ಟೋಕನ್‌ಗಳನ್ನು 2020ರ ಫೆಬ್ರವರಿ 1ರಂದು ಒಂದು ದಿನ ಮಾತ್ರ ನೀಡಲಾಗುವುದು ಎನ್ನುವ ಪ್ರಕಟನೆೆಯೊಂದನ್ನು ನಾಡಕಚೇರಿಯ ಗೋಡೆಗೆ ಅಂಟಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಆಧಾರ್ ಟೋಕನ್‌ಗಾಗಿ ನಾಲ್ಕು ತಿಂಗಳು ಕಾಯುವಂತಹ ಪರಿಸ್ಥಿತಿ ಎದುರಾಗಿದೆ.


ವಿಟ್ಲ ನಾಡಕಚೇರಿಯಲ್ಲಿ ಕೆಲವು ಗ್ರಾಪಂಗಳ ಸದಸ್ಯರೇ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಪಂಚಾಯತ್ ಸದಸ್ಯರೇ ಹಣಕೊಟ್ಟು ಟೋಕನ್‌ಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವು ಕೆಲಸಗಳು ಅನಧಿಕೃತವಾಗಿ ನಡೆಯುತ್ತವೆ. ಇದರಿಂದ ಸಾರ್ವಜನಿಕರು ಅಗತ್ಯ ಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗಿದೆ.

-ರಾಮಣ್ಣ ವಿಟ್ಲ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News