ಬ್ಯಾಂಕ್ಗಳ ವಿಲಿನೀಕರಣ ವಿರೋಧಿಸಿ ಪಂಜಿನ ಮೆರವಣಿಗೆ
ಉಡುಪಿ, ಸೆ.26: ಕೇಂದ್ರ ಸರಕಾರದ 10 ಸಾರ್ವಜನಿಕ ರಂಗದ ಬ್ಯಾಂಕ್ಗಳನ್ನು ವಿಲಿನೀಕರಣ ಮಾಡುವ ಏಕಪಕ್ಷೀಯ ನಿರ್ಣಯವನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಪಂಜಿನ ಮೆರವಣಿಗೆಯನ್ನು ಗುರುವಾರ ಸಂಜೆ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿಯ ಜೋಡುಕಟ್ಟೆಯಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಬೆಳಗಿಸಿದ ಪಂಜನ್ನು ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯು ಕೋರ್ಟ್ ರಸ್ತೆ, ಕೆ.ಎಂ. ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಾರ್ಪೊರೇಶನ್ ಬ್ಯಾಂಕಿನ ವಲಯ ಕೇರಿ ಆವರಣದಲ್ಲಿ ಸಮಾಪ್ತಿಗೊಂಡಿತು.
ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಸಮಿತಿಯ ಸಂಚಾಲಕ ಕೆ.ಶಂಕರ್ ಮಾತನಾಡಿ, ಬ್ಯಾಂಕ್ ವಿಲೀಕರಣದಿಂದ ಭವಿಷ್ಯದ ಉದ್ಯೋಗ ಅವಕಾಶಗಳು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಇದು ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ. ಈಗಾಗಲೇ ಹಲವು ಬ್ಯಾಂಕಿಗಳ ವಿಲೀನ ಪ್ರಕ್ರಿಯೆಯಿಂದ ಸಾಕಷ್ಟು ಶಾಖೆಗಳು ಮುಚ್ಚಿವೆ. ಇದರಿಂದ ಅನೇಕ ಖಾತೆದಾರರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.
ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ, ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ನ ಡಾ.ಪಿ.ವಿ.ಭಂಡಾರಿ, ಸೈಯದ್ ಸಿರಾಜ್ ಅಹಮದ್ ಮಾತನಾಡಿದರು. ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ್, ಜಿಲ್ಲಾ ಬ್ಯಾಂಕ್ ನೌಕರ ಸಂಘದ ಅಧ್ಯಕ್ಷ ರಾಮಮೋಹನ್, ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್ ಡಿಸೋಜ, ಬ್ಯಾಂಕ್ ನೌಕರರ ಫೆಡರೇಶನ್ನ ರವೀಂದ್ರ, ಮುಖಂಡರಾದ ಜಯನ್ ಮಲ್ಪೆ, ರಘುರಾಮ ಕೃಷ್ಣ ಬಲ್ಲಾಳ್, ಯೋಗೀಶ್ ಶೇಟ್, ಕಾಸಿಂ ಸಾಹೇಬ್, ಸುಧೀಂದ್ರ, ಬಾಲಕೃಷ್ಣ ಶೆಟ್ಟಿ, ಶಶಿಧರ ಗೊಲ್ಲ, ಕವಿರಾಜ್, ಕೆ.ವಿ.ಭಟ್, ವಿಶ್ವ ನಾಥ್, ಪ್ರೇಮನಾಥ್, ಶಂಕರ್, ನಾಗೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.