ಪುಂಜಾಲಕಟ್ಟೆ: ಅ.3ರಂದು "ಸುಧನ್ವ" ನೂತನ ಕಟ್ಟಡದ ಉದ್ಘಾಟನೆ
ಬಂಟ್ವಾಳ, ಸೆ. 27: ಪುಂಜಾಲಕಟ್ಟೆಯ ಹೃದಯಭಾಗದಲ್ಲಿ ಸುಮಾರು 1.60ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಿಲಾತಬೆಟ್ಟು ವ್ಯವಸಾಯ ಸಹಕಾರ ಸಂಘದ ಕಚೇರಿ, ನೂತನ ಕಟ್ಟಡ "ಸುಧನ್ವ"ದ ಉದ್ಘಾಟನಾ ಸಮಾರಂಭ ಅ. 3ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ತಿಳಿಸಿದ್ದಾರೆ.
ನೂತನ ಕಟ್ಟಡದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಟ್ಟಡದ ಉದ್ಘಾಟನೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಂಘದ ಪ್ರಧಾನ ಕಚೇರಿಯ ಉದ್ಘಾಟನೆ ನೆರವೇರಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಭದ್ರತಾ ಕೊಠಡಿ, ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಕಂಪ್ಯೂಟರೀಕರಣದ ಉದ್ಘಾಟನೆ ನೆರವೇರಿಸುವರು ಎಂದರು.
ಹಾಗೆಯೇ ಕೃಷಿ ಉಪಕರಣ ಮಾರಾಟದ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಠೇವಣಿ ಪತ್ರ ಬಿಡುಗಡೆಗೊಳಿಸುವರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಕೌಶಲ್ಯಾಭಿವೃದ್ಧಿ ಖಾತೆಯ ಉದ್ಘಾಟನೆ ನೆರವೇರಿಸುವರು. ಜಿಪಂ ಸದಸ್ಯ ತುಂಗಪ್ಪ ಬಂಗೇರ ಸ್ವಸಹಾಯ ಸಂಘಗಳ ಠೇವಣಾತಿಪತ್ರ ಬಿಡುಗಡೆಗೊಳಿಸುವರು. ದ.ಕ.ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರಸಂಘಗಳ ಅಧ್ಯಕ್ಷ ರವೀಂದ್ರಕಂಬಳಿ, ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ, ಬಂಟ್ವಾಳ ತಾ.ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿರಾವ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಕ್ಷಗಾನ ತಾಳಮದ್ದಲೆ ಹಾಗೂ ದೇವದಾಸ ಕಾಫಿಕಾಡ್ ರವರ ಚಾಪರ್ಕ ತಂಡದಿಂದ ತುಳು ಹಾಸ್ಯಮಯ ನಾಟಕವು ನಡೆಯಲಿದೆ ಎಂದರು.
ಇದೀಗ ನೂತನ ಕಟ್ಟಡದಲ್ಲಿ ರೈತ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಉಪಕರಣಗಳ ಮಾರಾಟ ವಿಭಾಗವನ್ನು ತೆರೆಯಲಾಗು ತ್ತಿದೆ. ಸದಸ್ಯರ ಬೇಡಿಕೆ ಆಡಳಿತ ಮಂಡಳಿ ತಕ್ಷಣ ಸ್ಪಂದಿಸುತ್ತಿದೆ. ಮುಂದಿನ ದಿನದಲ್ಲಿ ಸ್ವಂತ ಸ್ಥಳದಲ್ಲಿ ಸದಸ್ಯರ ಸಲಹೆಯನ್ನು ಆಧರಿಸಿ ಸಂಘದ ಸುಸಜ್ಜಿತ ಪ್ರಧಾನಕಚೇರಿ, ವಾಣಿಜ್ಯ ಸಂಕೀರ್ಣ ವನ್ನು ನಿರ್ಮಿಸುವ ಯೋಜನೆಯು ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷುಮೇಶ್ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ನಿರ್ದೇಶಕರಾದ ಸುಂದರ ನಾಯ್ಕ, ನಾರಾಯಣ ಪೂಜಾರಿ, ಪಿ.ಎಂ.ಪ್ರಭಾಕರ, ಬೂಬ ಸಪಲ್ಯ, ದಿನೇಶ್ ಮೂಲ್ಯ, ಮಾಜಿ ಮು.ಕಾ.ಬೂಬ ಪೂಜಾರಿ, ಕೇಶವ ಕಿಣಿ ಮೊದಲಾದವರಿದ್ದರು.