ದೇವಸ್ಥಾನ ಅಡುಗೆಕೋಣೆಗೆ ಸಿಸಿಟಿವಿ ಕಡ್ಡಾಯ: ಸಚಿವ ಶ್ರೀನಿವಾಸ ಪೂಜಾರಿ
ಮಂಗಳೂರು, ಸೆ.27: ಸರಕಾರಿ ಮತ್ತು ಖಾಸಗಿ ದೇವಾಲಯಗಳಲ್ಲಿ ಸಿಸಿಟಿವಿಯ ಅಳವಡಿಕೆಗೆ ಶೀಘ್ರ ಸೂಚನೆ ನೀಡಿ ಅಳವಡಿಸುವಂತೆ ದೇವಾಲಯಗಳ ಆಡಳಿತ ಮಂಡಳಿ ಗಮನ ಹರಿಸಬೇಕು. ದೇವಸ್ಥಾನಗಳ ಅಡುಗೆ ಕೋಣೆಗಳಿಗೆ ಸಿಸಿಟಿವಿ ಕಡ್ಡಾಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ದಸರಾ ಮೆರವಣಿಗೆಗೆ ಸಂಬಂಧಪಟ್ಟಂತೆ ರಸ್ತೆ ಬದಿಯಲ್ಲಿ ಅಡಚಣೆಯಾಗುವ ಮರಗಳ ಕೊಂಬೆಗಳನ್ನು ಕಡಿಯುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು.
ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ, ಸರಿಯಾದ ದಾಖಲಾತಿ ಹೊಂದಿದ ಗಾಡಿಗಳನ್ನು ಮೆರವಣಿಗೆಯಲ್ಲಿ ಬಳಸಬೇಕು. ವಿದ್ಯುತ್ ಬಳಕೆಯಲ್ಲಿ ಜಾಗರೂಕತೆ ಮುಖ್ಯ. ಆಹಾರ ವ್ಯವಸ್ಥೆಯು ಅಚ್ಚುಕಟ್ಟಾಗಿ, ಮಿತವ್ಯಯವಾಗಿ ಬಳಸುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ವಯಸ್ಕರು, ಮಹಿಳೆಯರು, ಮಕ್ಕಳು ಮತ್ತು ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಮಾಡುವಂತೆ ದೇವಾಲಯ ಗಳ ಆಡಳಿತ ಮಂಡಳಿಗಳಿಗೆ ಸೂಚಿಸಲಾಯಿತು. ದಸರಾ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ವತಿಯಿಂದ 24 ಗಂಟೆ ನಿರಂತರ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾತನಾಡಿ, ದಸರಾ ಸಂದರ್ಭದಲ್ಲಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ಪ್ರಸಾದ ನೀಡುವುದು ಅಥವಾ ಇನ್ನಿತರ ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಹಬ್ಬ ಮತ್ತು ಉಳಿದ ಸಂದರ್ಭ ಪ್ಲಾಸ್ಟಿಕ್ ಬಳಕೆ ಕಾಣಿಸಬಾರದು. ಇದರ ಕುರಿತು ಆಯಾ ದೇವಾಲಯಗಳ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶು ಗಿರಿ, ಶಾಸಕ ವೇದವ್ಯಾಸ್ ಕಾಮತ್, ಮಹಾನಗರಪಾಲಿಕೆ ಆಯುಕ್ತ ಎಸ್. ಅಜಿತ್ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.