ಅಜ್ಜಿನಡ್ಕ: ರಸ್ತೆ ಕಾಮಗಾರಿಗೆ ಚಾಲನೆ
ಮಂಗಳೂರು, ಸೆ.28: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಜ್ಜಿನಡ್ಕದ ಮುಖ್ಯ ರಸ್ತೆಗೆ ನಬಾರ್ಡ್ ಯೋಜನೆಯಡಿ ಮಂಜೂರಾಗಿದ್ದ 60 ಲಕ್ಷ ರೂ. ಮೊತ್ತದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಾಸಕ ಯು.ಟಿ.ಖಾದರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಈ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆಯಲು ಕಷ್ಟಕರವಾಗಿದ್ದು ಊರಿನ ನಾಗರಿಕರ, ಹಿರಿಯರ ಮನವಿಗೆ ಸ್ಪಂದಿಸಿ ನಬಾರ್ಡ್ ಯೋಜನೆಯಡಿ ಕಾಮಗಾರಿ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ಮಾದರಿ ರಸ್ತೆಯಾಗಲಿದೆ ಎಂದು ಹೇಳಿದರು.
ರಸ್ತೆಗೆ ಅನುದಾನ ಒದಗಿಸಿದ ಶಾಸಕರನ್ನು ಅಜ್ಜಿನಡ್ಕ ಎಸ್ವೈಎಸ್, ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಪದಾಧಿಕಾರಿಗಳಾದ ಮುಸ್ತಫಾ ಕೆ.ಪಿ, ಹಂಝ.ಕೆಎಂ, ಕೆಸಿಎಫ್ ಅಜ್ಜಿನಡ್ಕ ಶಾಖೆಯ ಅಧ್ಯಕ್ಷ ಕಮಾಲುದ್ದೀನ್ ಸನ್ಮಾನಿಸಿದರು.
ಕೋಟೆಕಾರ್ ಪಟ್ಟಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ್ ಗಾಂಭೀರ್, ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ, ಅಜ್ಜಿನಡ್ಕ ಬದ್ರಿಯಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಮೊಯಿದಿನ್ ಬಾವ, ಹಮೀದ್ ಹಸನ್ ಮಾಡೂರು, ಪುಷ್ಠಿ ಮುಹಮ್ಮದ್, ಕಾಂಗ್ರೆಸ್ ಅಲ್ಪಸಂಖ್ಯಾತ ಕೋಟೆಕಾರ್ ಘಟಕ ಅಧ್ಯಕ್ಷ ಜಮಾಲ್ ಅಜ್ಜಿನಡ್ಕ, ಸುಮತಿ ಉಪಸ್ಥಿತರಿದ್ದರು.