ಚಾರ್ ಮಿನಾರ್ಗೆ ಕೇಸರಿ ಬಣ್ಣ ಬಳಿದು ಪೂಜೆ !
Update: 2019-09-30 22:38 IST
ಹೈದರಾಬಾದ್, ಸೆ.30: ಹೈದರಾಬಾದ್ ನಲ್ಲಿರುವ ಐತಿಹಾಸಿಕ ಸ್ಮಾರಕ ಚಾರ್ ಮಿನಾರ್ಗೆ ಕೇಸರಿ ಬಣ್ಣ ಬಳಿದು ಪೂಜಾ ಕಾರ್ಯ ಆರಂಭಿಸಿದ ಆಘಾತಕಾರಿ ವಿದ್ಯಮಾನ ನಡೆದಿರುವುದಾಗಿ ವರದಿಯಾಗಿದೆ.
ಚಾರ್ಮಿನಾರ್ ಪೊಲೀಸ್ ಠಾಣೆಯ ಎದುರು, ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ಆಶ್ಚರ್ಯಕರವಾಗಿದೆ. ಈ ಕೆಲಸವನ್ನು ಆರಂಭದಲ್ಲಿಯೇ ತಡೆಯದಿದ್ದರೆ ಮತ್ತೊಂದು ವಿವಾದಕ್ಕೆ ನಾಂದಿ ಹಾಡುವ ಪ್ರಯತ್ನ ನಡೆಯಬಹುದು ಎಂದು ವರದಿ ತಿಳಿಸಿದೆ.
ಸ್ಥಾಪಿತ ಹಿತಾಸಕ್ತಿಗಳ ಪರೋಕ್ಷ ಪ್ರೇರಣೆಯಿಂದ ಇಂತಹ ಪ್ರಕ್ರಿಯೆ ನಡೆಯುತ್ತಿದೆ. ಚಾರ್ಮಿನಾರ್ನ ದಕ್ಷಿಣ ಮೂಲೆಯಲ್ಲಿ ನಿರ್ಮಿಸಲಾಗಿರುವ , ಯುನಾನಿ ಆಸ್ಪತ್ರೆಗೆ ಮುಖ ಮಾಡಿರುವ ದೇವಸ್ಥಾನದ ವಿಷಯದಲ್ಲಿ ಈ ಹಿಂದೆಯೂ ವಿವಾದ ಹುಟ್ಟಿಕೊಂಡಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.