ಬೌದ್ಧಿಕ, ಮಾನಸಿಕ, ಶಾರೀರಿಕ ನೆಮ್ಮದಿಗೆ ಯೋಗ ಸಹಕಾರಿ: ಡಾ. ಎಂ.ಮೋಹನ ಆಳ್ವ
ಬಂಟ್ವಾಳ: ಬೌದ್ಧಿಕ, ಮಾನಸಿಕ, ಶಾರೀರಿಕ ನೆಮ್ಮದಿಗೆ ಯೋಗ ಸಹಕಾರಿ. ಪ್ರಪಂಚದ ೧೭೭ಕ್ಕೂ ಅಧಿಕ ರಾಷ್ಟ್ರಗಳಿಂದು ಯೋಗವನ್ನು ಸ್ವೀಕರಿಸಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.
ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ರಿ., ಮಂಗಳೂರು ಹಾಗೂ ಬಂಟ್ವಾಳ ಘಟಕ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಸ್ಮರಣಶಕ್ತಿ, ದೇಹದ ಉಲ್ಲಾಸಕ್ಕೆ ಯೋಗ ಸಹಕಾರಿ, ಹಲವು ರೋಗಗಳು ಯೋಗದಿಂದ ಗುಣವಾದ ಉದಾಹರಣೆಗಳಿವೆ ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ತಾನು ಸ್ವತಃ ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದು, ದೇಹಾರೋಗ್ಯ ಕಾಪಾಡಿಕೊಂಡಿದ್ದೇನೆ. ಯೋಗಾಸನ ಮತ್ತು ಸಸ್ಯಾಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ದೇಹವನ್ನು ಆರೋಗ್ಯದಿಂದಿಡಲು ಸಾಧ್ಯ ಎಂದು ಶುಭ ಹಾರೈಸಿದರು.
ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಸಮಾಜ ಸೇವಕ ಪ್ರಕಾಶ್ ಕಾರಂತ, ರೋಟರಿ ಟೌನ್ ಅಧ್ಯಕ್ಷ ಜಯರಾಜ್ ಬಂಗೇರ, ಬಿಲ್ಲವ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ, ಉದ್ಯಮಿ ಯೋಗಾಸನ ಸ್ಪರ್ಧೆ ಆಯೋಜಕ ಸಮಿತಿಯ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್, ಅಧ್ಯಕ್ಷ ಡಾ. ಶಿವಪ್ರಸಾದ್ ಶೆಟ್ಟಿ, ಪ್ರಧಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ, ಪ್ರಸಾದ್ ಕುಮಾರ್ ಮತ್ತು ಸುರೇಶ್ ನಾಯಕ್ ಕಾರ್ಯದರ್ಶಿಯಾಗಿ ಡಾ. ರಘವೀರ್ ಅವಧಾನಿ, ಕೋಶಾಧಿಕಾರಿ ಡಾ. ಸುಬ್ರಹ್ಮಣ್ಯ ಭಟ್ ಟಿ., ಲೆಕ್ಕಪರಿಶೋಧಕ ಯತೀಶ್ ಭಂಡಾರಿ ಉಪಸ್ಥಿತರಿದ್ದರು. ಇದೇ ವೇಳೆ ಯೋಗಗುರು ಡಾ. ರಘುವೀರ ಅವಧಾನಿ ಮತ್ತು ಹಿರಿಯ ಯೋಗಪಟು, ತೀರ್ಪುಗಾರ ಮೋನಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಡಾ. ರಘುವೀರ ಅವಧಾನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸಂಚಾಲಕ ನ್ಯಾಯವಾದಿ ಪ್ರಸಾದ್ ಕುಮಾರ್ ವಂದಿಸಿದರು.
ಎಂಟರಿಂದ ಎಂಭತ್ತು ವರ್ಷದೊಳಗಿನ ಸುಮಾರು ೩೦೦ರಷ್ಟು ಯೋಗಪಟುಗಳು ಶನಿವಾರ ನೋಂದಾವಣೆಗೊಂಡರು. ಯೋಗ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮೋನಪ್ಪ ಪೂಜಾರಿ, ದಾಮೋದರ ರಾಮಕುಂಜ ನೇತೃತ್ವದಲ್ಲಿ ರಾಜ್ಯ ಮಟ್ಟದ ಮೂವತ್ತು ತೀರ್ಪುಗಾರರು ಈ ಸ್ಪರ್ಧಾಕೂಟದಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ರವಿವಾರ ಸ್ಪರ್ಧೆಯ ಸಮಾರೋಪ ನಡೆಯಲಿದೆ. ಇದಕ್ಕೂ ಮುನ್ನ ಆಳ್ವಾಸ್ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.