×
Ad

ಪ್ರಾಮಾಣಿಕತೆ ಮೆರೆದ ಕೇರಳದ ಹಿರಿಯ ನಾಗರಿಕ

Update: 2019-10-05 21:23 IST

ಮಂಗಳೂರು, ಅ.5: ನಗರದ ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ನಗದು ಹಣ ಮತ್ತು ಇತರ ಹಲವು ದಾಖಲೆಗಳನ್ನು ಒಳಗೊಂಡ ಪರ್ಸ್‌ನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿ ಅದು ವಾರಸುದಾರರಿಗೆ ತಲುಪುವಂತೆ ವ್ಯವಸ್ಥೆ ಮಾಡುವ ಮೂಲಕ ಹಿರಿಯ ನಾಗರಿಕ ರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಕಾಸರಗೋಡಿನ ಅಶ್ವಿನಿನಗರದ ಜಯಪ್ರಕಾಶ್ ಶೆಣೈ (64) ಪ್ರಾಮಾಣಿಕತೆ ಮೆರೆದವರು. ಮಂಗಳೂರು ತಾಲೂಕು ಹರೇಕಳ ಪಂಜಿಮಾಡಿಯ ಮುಹಮ್ಮದ್ ಸಕೀರ್ (28) ಕಳೆದುಕೊಂಡ ಪರ್ಸ್ ಮರಳಿ ಪಡೆದವರು.

ಅ.4ರಂದು ಬೆಳಗ್ಗೆ 8:45ಕ್ಕೆ ಜಯಪ್ರಕಾಶ್ ಶೆಣೈ ಅವರಿಗೆ ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಪರ್ಸ್ ಸಿಕ್ಕಿದ್ದು, ಅದರಲ್ಲಿ 67,685 ರೂ. ನಗದು, ನಾಲ್ಕು ಎಟಿಎಂ ಕಾರ್ಡ್‌ಗಳು, ಎರಡು ಡ್ರೈವಿಂಗ್ ಲೈಸನ್ಸ್‌ಗಳಿದ್ದವು. ಅದನ್ನು ಅವರು ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್) ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಇನ್‌ಸ್ಪೆಕ್ಟರ್ ಅವರು ಪರ್ಸ್‌ನಲ್ಲಿದ್ದ ವಿಳಾಸದ ಮೂಲಕ ಅದರ ವಾರಸುದಾರ ಮುಹಮ್ಮದ್ ಸಕೀರ್ ಅವರನ್ನು ಸಂಪರ್ಕಿಸಿ ಪರ್ಸ್ ಸಿಕ್ಕಿರುವ ವಿಷಯ ತಿಳಿಸಿದ್ದರು. 11 ಗಂಟೆ ವೇಳೆಗೆ ಸಕೀರ್ ಆರ್‌ಪಿಎಫ್ ಕಚೇರಿಗೆ ಭೇಟಿ ನೀಡಿ ಪರ್ಸ್‌ನ ಗುರುತನ್ನು ಪತ್ತೆ ಹಚ್ಚಿದರು. ಸೂಕ್ತ ಪರಿಶೀಲನೆಯ ಬಳಿಕ ಪರ್ಸ್‌ನ್ನು ಸಕೀರ್‌ಗೆ ಮರಳಿಸಲಾಯಿತು.

ಇದೇ ವೇಳೆ ರೈಲು ನಿಲ್ದಾಣದ ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಕಿಶನ್ ಸಮಕ್ಷಮ ಆರ್‌ಪಿಎ್ ಇನ್‌ಸ್ಪೆಕ್ಟರ್ ಮನೋಜ್‌ಕುಮಾರ್ ಅವರು ಪ್ರಾಮಾಣಿಕತೆ ಮರೆದ ಹಿರಿಯ ನಾಗರಿಕ ಜಯ ಪ್ರಕಾಶ್ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

ರೈಲು ನಿಲ್ದಾಣದಲ್ಲಿ ಅಥವಾ ಆವರಣದಲ್ಲಿ ಸೊತ್ತುಗಳನ್ನು ಕಳೆದುಕೊಂಡರೆ ಅಥವಾ ಯಾವುದೇ ಸಮಸ್ಯೆಗಳಿದ್ದರೆ ಆರ್‌ಪಿಎ್ ಹೆಲ್ಪ್‌ಲೈನ್ (ಉಚಿತ) ನಂ. 182 ಸಂಪರ್ಕಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News