ರಾಜ್ಯದಿಂದ ಸಮರ್ಪಕವಾಗಿ ನೆರೆ ಸಮಸ್ಯೆ ನಿರ್ವಹಣೆ-ನಳಿನ್ ಕುಮಾರ್ ಕಟೀಲ್

Update: 2019-10-07 12:11 GMT

ಪುತ್ತೂರು: ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ನೆರೆ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದು, ಕೇಂದ್ರದ ಅನುದಾನಕ್ಕೆ ಕಾಯದ ಮುಖ್ಯ ಮಂತ್ರಿಗಳು 3 ಸಾವಿರ ಕೋಟಿ ರೂ. ಅನುದಾನವನ್ನು ತಕ್ಷಣವೇ ಬಿಡುಗಡೆಗೊಳಿಸಿದ್ದು, ಇದೀಗ ಕೇಂದ್ರ ಸರ್ಕಾರವು 1200 ಕೋಟಿ ರೂ. ಮಧ್ಯಂತರ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಸೋಮವಾರ ಪುತ್ತೂರು ನಗರಸಭೆ ಹಾಗೂ ಕೆಯುಐಡಿಎಫ್‍ಸಿ ಇವುಗಳ ಜಂಟೀ ಆಶ್ರಯದಲ್ಲಿ ಎಡಿಬಿ ಯೋಜನೆಯಡಿ ರೂ.113 ಕೋಟಿ ವೆಚ್ಚದಲ್ಲಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಪ್ರಾರಂಭೊತ್ಸವದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ನೆರೆಯಿಂದ ಸಂತ್ರಸ್ತರಾಗಿ ಮನೆ ಕಳೆದುಕೊಂಡಿರುವ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕಾಗಿ ರೂ. 5 ಲಕ್ಷ ನೆರವು ನೀಡುವ ಉತ್ತಮ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದು, ಈ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಈ ಪೈಕಿ ರೂ. 1 ಲಕ್ಷ ಈಗಾಗಲೇ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಉಳಿದ ಎಲ್ಲಾ ಹಣ ಶೀಘ್ರ ಜಮೆಯಾಗಲಿದೆ. ಸಂತ್ರಸ್ತ ಕುಟುಂಬಕ್ಕೆ ರೂ. 10 ಸಾವಿರ ತಕ್ಷಣದ ಪರಿಹಾರ ಒದಗಿಸಿದ್ದು ಎಲ್ಲಾ ಶಾಸಕರ ಮೂಲಕ 4 ಲಕ್ಷ ಕುಟುಂಬಗಳಿಗೆ ಈ  ಅನುದಾನವನ್ನು ವಿತರಣೆ ಮಾಡಲಾಗಿದೆ. ಅಲ್ಲದೆ ಸಂತ್ರಸ್ತ ಕುಟುಂಬಗಳಿಗೆ ಪ್ರತಿ ತಿಂಗಳಿಗೆ ರೂ. 5 ಸಾವಿರ ಬಾಡಿಗೆ ರೂಪದಲ್ಲಿ ಆಯಾ ಪ್ರದೇಶದ ಎಸಿ ಮತ್ತು ಡಿಸಿಗಳ ಮೂಲಕ ವಿತರಣೆ ಮಾಡಲಾಗಿದೆ. ಇದೀಗ ಜಮೀನು ಕಳೆದುಕೊಂಡಿರುವ ಕುಟುಂಬಗಳಿಗೆ ಕಳೆದುಕೊಂಡಷ್ಟೇ ಜಮೀನು ಒದಗಿಸಿ ಕೊಡುವ ಬಗ್ಗೆ ತೀರ್ಮಾನಿಸಲಾಗಿದ್ದು, ಮೂಡಿಗೆರೆಯಲ್ಲಿ 350 ಎಕ್ರೆ ಜಮೀನು ಸಂತ್ರಸ್ತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

ದೇಶದ 13 ರಾಜ್ಯಗಳಲ್ಲಿ ನರೆ ಸಮಸ್ಯೆ ಉಂಟಾಗಿದೆ. ಈ ಪೈಕಿ ಕರ್ನಾಟಕ ಸೇರಿದಂತೆ 12 ರಾಜ್ಯಗಳಿಗೆ ಕೇಂದ್ರದ ತಂಡವು ಆಗಮಿಸಿ ಸಮೀಕ್ಷೆ ನಡೆಸಿದೆ. ಈ ಪೈಕಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ರೂ. 1200 ಕೋಟಿ ಹಣವನ್ನು ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಸರ್ಕಾರದಿಂದ ರೂ. 45 ಕೋಟಿ ಬಿಡುಗಡೆಯಾಗಿದ್ದು, ಪುತ್ತೂರಿನ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಯ ಕಾಮಗಾರಿಗೆ ರೂ. 1.60 ಲಕ್ಷ ಅನುದಾನ ಮಂಜೂರುಗೊಂಡಿದೆ. ರಸ್ತೆ ಕಾಮಗಾರಿ ತಕ್ಷಣವೇ ಆರಂಭಗೊಳ್ಳಲಿದೆ ಎಂದರು. 

ನಗರಾಡಳಿತಕ್ಕೆ ಆಡಳಿತ ಮಂಡಳಿ ನೇಮಕಕ್ಕೆ ಕೆಲವೊಂದು ಕಾನೂನು ಸಮಸ್ಯೆಗಳಿಂದಾಗಿ ವಿಳಂಭವಾಗಿದೆ. ಈ ಬಗ್ಗೆ ತಾನು ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ. ನ್ಯಾಯಾಲದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ, ಅತಿ ಶೀಘ್ರದಲ್ಲಿ ನಗರಸಭಾ ಸದಸ್ಯರಿಗೆ ಅಧಿಕಾರದ ಹಕ್ಕು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಗಳು ರಾಜ್ಯದ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಜನರ ಮೂಲಸೌಕರ್ಯ ಪೂರೈಕೆಯ ಕುರಿತು ನೆರೆ ಸಮಸ್ಯೆಯ ನಡುವೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ನಗರಗಳಲ್ಲಿ ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ ಅಸಮರ್ಪ ಕವಾಗಿರುವುದಕ್ಕೆ ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು ಕಾರಣವಾಗಿದೆ. ನಗರ ಬೆಳವಣಿಗೆಯ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆ ಇರಬೇಕು. ಅಧಿಕಾರಿಗಳು ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ ಬಗ್ಗೆ ವ್ಯವಸ್ಥೆಗಳಿಲ್ಲದೆ ಅನಿಯಮಿತವಾಗಿ ಫ್ಲಾಟ್ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ. ಇದರಿಂಗಾಗಿ ಸಮಸ್ಯೆ ಉಲ್ಬಣಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ಪುತ್ತೂರು ನಗರದಲ್ಲಿ ಬಹುತೇಕ ಮಂದಿಗೆ ಈಗಾಗಲೇ 24 ಗಂಟೆಗಳ ನೀರು ಪೂರೈಕೆಯಾಗುತ್ತಿದೆ. ನೀರು ಸಿಗದ ಮಂದಿಗೆ ಈ ಯೋಜನೆ ಸಹಕಾರಿಯಾಗಲಿದೆ. ನಗರಸಭೆಯಲ್ಲಿ ಮುಂದಿನ 25 ವರ್ಷಗಳಿಗೆ ಪೂರಕ ವಾಗುವಂತೆ ಕುಡಿಯುವ ನೀರು ಯೋಜನೆಯನ್ನು ಸಿದ್ಧಪಡಿಸಲಾಗಿದೆ. ನಗರದ ಜನತೆ 1 ಲಕ್ಷಕ್ಕೆ ಏರಿದರೂ ಯೋಜನೆಯಿಂದ ಕುಡಿಯುವ ನೀರಿಗೆ ಸಮಸ್ಯೆಗಳು ಆಗಲಾರದು ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪತ್ತೂರು ಉಪ ವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಗುತ್ತಿಗೆದಾರ ಪ್ರಮೋದ್ ಉಪಸ್ಥಿತರಿದ್ದರು. 

ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿದರು. ಕೆಯುಐಡಿಎಫ್‍ಸಿಯ ಸಹಾಯಕ ಅಭಿಯಂತರ ಮಾದೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News