ಬಾಕಿ ವೇತನ ಪಾವತಿಗಾಗಿ ಒತ್ತಾಯ: ಅ.15ರಿಂದ ಬಿಎಸ್ಎನ್ಎಲ್ ಗುತ್ತಿಗೆ ಕಾರ್ಮಿಕರಿಂದ ಧರಣಿ
ಮಂಗಳೂರು, ಅ.9: ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಎಸ್ಎನ್ಎಲ್ ಗುತ್ತಿಗೆ ಕಾರ್ಮಿಕರಿಗೆ ಎಸಗುವ ಅನ್ಯಾಯವನ್ನು ಖಂಡಿಸಿ ಸಿಐಟಿಯು ಅಧೀನದ ಬಿಎಸ್ಎನ್ಎಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ ವತಿಯಿಂದ ಅ.15ರಿಂದ ಕೇಂದ್ರ ಸರಕಾರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ (ಪದುವಾ ಹೈಸ್ಕೂಲ್ ಬಳಿ)ಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಯೂನಿಯನ್ ಅಧ್ಯಕ್ಷ ತಿಳಿಸಿದ್ದಾರೆ.
ಗುತ್ತಿಗೆ ಕಾರ್ಮಿಕರಿಗೆ 2018ರ ಆಗಸ್ಟ್ನಿಂದ ಮಾಸಿಕ ವೇತನ ನೀಡದೆ ಅನ್ಯಾಯವೆಸಗಲಾಗುತ್ತಿದೆ. ಬಿಎಸ್ಎನ್ಎಲ್ ಗ್ರಾಹಕ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಕೂಡ ಮಾಸಿಕ ವೇತನವಲ್ಲದೆ ಬೇರೇನೂ ಸೌಲಭ್ಯವಿಲ್ಲ. ಆಡಳಿತ ವರ್ಗ, ಗುತ್ತಿಗೆ ದಾರರನ್ನು ಕಾರ್ಮಿಕರು ಪದೇ ಪದೇ ಒತ್ತಾಯಿಸುತ್ತಿದ್ದಾರೆ. ಇದೀಗ ಮಾಸಿಕ ವೇತನವನ್ನೂ ನೀಡದೆ ಶೋಷಣೆ ನಡೆಸುತ್ತಿದ್ದಾರೆ. ಇದರಿಂದ ಈ ಕಾರ್ಮಿಕರು ಕುಟುಂಬ ನಿರ್ವಹಣೆಗೆ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯೂನಿಯನ್ನ ಅಧ್ಯಕ್ಷ ವಸಂತ ಆಚಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.