ಚಿನ್ನದ ಸರ ಸೆಳೆದು ಪರಾರಿ

Update: 2019-10-09 17:15 GMT

 ಕಾಪು, ಅ.9: ದನಗಳಿಗೆ ಹುಲ್ಲು ತರಲೆಂದು ಹೋಗುತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ 3.5 ಪವನ್ ತೂಕದ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಗಳಿಬ್ಬರು ಸೆಳೆದು ಎಳೆದೊಯ್ದ ಘಟನೆ ಇನ್ನಂಜೆ ಗ್ರಾಪಂನ ಗೋಳಿಕಟ್ಟೆ ಎಂಬಲ್ಲಿದ್ದ ವರದಿಯಾಗಿದೆ.

 ಇನ್ನಂಜೆ ಗೋಳಿಕಟ್ಟೆ ಬಳಿ ಮೂಡುಮನೆಯ ಶಾಂತಾ ಆಚಾರ್ಯ (68) ಇವರು ಮಂಗಳವಾರ ಸಂಜೆ 5ಗಂಟೆ ಸುಮಾರಿಗೆ ದನಕ್ಕೆ ಹುಲ್ಲು ತರಲೆಂದು ಹೋಗುತಿದ್ದಾಗ ಗ್ರಾಪಂ ಕಟ್ಟಡದ ಬಳಿ ಒಬ್ಬ ಅಪರಿಚಿತ ಮೋಟಾರು ಸೈಕಲ್‌ನ್ನು ಚಾಲು ಇರಿಸಿ ಕುಳಿತಿದ್ದು, ಇನ್ನೊಬ್ಬ ಸಮೀಪದಲ್ಲಿ ಮೂತ್ರೆ ಶಂಕೆ ಮಾಡುತಿದ್ದ. ಶಾಂತಾ ಅವರು ಮೂತ್ರಶಂಕೆ ಮಾಡುತಿದ್ದವನನ್ನು ದಾಟುತಿದ್ದಂತೆ ಆತ ಹಿಂದಿನಿಂದ ಕುತ್ತಿಗೆಗೆ ಕೈಹಾಕಿ ಚಿನ್ನದ ಸರವನ್ನು ಸೆಳೆದು, ಕಾಯುತಿದ್ದ ಮೋಟಾರು ಸೈಕಲ್ ಏರಿ ಇಬ್ಬರೂ ಬಂಟಕಲ್‌ನತ್ತ ಪರಾರಿಯಾದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃದ್ಧರಿಗೆ ವಂಚನೆ: ಇದೇ ರೀತಿಯ ಇನ್ನೊಂದು ವಂಚನೆಯ ಘಟನೆ ಉಡುಪಿ ನಗರಠಾಣೆಯಲ್ಲಿ ದಾಖಲಾಗಿದೆ. ಸೆ.9ರಂದು ನಡೆದ ಈ ಘಟನೆ ತಡವಾಗಿ ವರದಿಯಾಗಿದೆ. ಇಲ್ಲಿ ವಂಚನೆಗೊಳಗಾದವರು ಬ್ರಹ್ಮಾವರ ಸಮೀಪದ ಬೈಕಾಡಿ ಹಾಡಿಮನೆಯ ವಿಠಲ ಶೆಟ್ಟಿ (72) ಎಂಬವರು.

ಘಟನೆ ನಡೆದಿರುವುದು ಕೃಷ್ಣ ಮಠದ ಬಳಿ ಇರುವ ರಾಘವೇಂದ್ರ ಮಠದ ಎದುರು. ಕಪ್ಪು ಮೋಟಾರು ಸೈಕಲ್‌ನಲ್ಲಿ ಬಂದ ಇಬ್ಬರು ವಿಠಲ ಶೆಟ್ಟಿ ಅವರಲ್ಲಿ ನಾವು ಪೊಲೀಸರು, ಇಲ್ಲಿ ಸಮೀಪದಲ್ಲಿ ಗಲಾಟೆಯಾಗುತ್ತಿದೆ. ನಿಮ್ಮ ಚಿನ್ನದ ಸರ ಮತ್ತು ಉಂಗುರ ಕೊಡಿ ನಾವು ಟವಲ್‌ನಲ್ಲಿ ಕಟ್ಟಿ ಕೊಡುತ್ತೇವೆ ಎಂದು ಹೇಳಿ ಅವರಿಂದ ಎರಡು ಚಿನ್ನದ ಉಂಗುರ ಮತ್ತು ಸರವನ್ನು ಪಡೆದು, ಸೈಕಲ್ ಸವಾರರನ್ನು ಅದನ್ನು ಟವಲ್‌ನಲ್ಲಿ ಕಟ್ಟಿದಂತೆ ನಟಿಸಿ ಖಾಲಿ ಟವಲ್ ನೀಡಿದ್ದರು. ಚಿನ್ನಾಭರಣದ ಒಟ್ಟು ಮೌಲ್ಯ 1.25 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News