ಹೆಬ್ರಿ: ಮನೆಗೆ ನುಗ್ಗಿ ಮಹಿಳೆಯ ಸರ ಸುಲಿಗೆ
Update: 2019-10-11 18:16 GMT
ಹೆಬ್ರಿ, ಅ.11: ನೀರು ಕೇಳುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗಿದ್ದ ಮಹಿಳೆಯ ಸರ ಅಪಹರಿಸಿರುವ ಘಟನೆ ಅ.11ರಂದು ಮಧ್ಯಾಹ್ನ 1:30ರ ಸುಮಾರಿಗೆ ಹೆಬ್ರಿ ಗ್ರಾಮದ ರಾಗಿಹಕ್ಲು ಎಂಬಲ್ಲಿ ನಡೆದಿದೆ.
ರಾಗಿಹಕ್ಲುವಿನ ಗುಲಾಬಿ ಆಚಾರ್ಯ(65) ಎಂಬವರು ಮನೆಯ ಹಿಂದಿನ ಬಾಗಿಲಿನ ಮೆಟ್ಟಲಿನಲ್ಲಿ ಒಬ್ಬರೇ ಕುಳಿತುಕೊಂಡಿದ್ದ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ನೀರು ಕೇಳಿದನು. ಆಗ ಅವರು ನೀರು ತರಲು ಮನೆಯ ಅಡುಗೆ ಕೋಣೆಗೆ ಹೋದಾಗ ಹಿಂದಿನಿಂದ ಬಂದ ಆತ ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ ಎನ್ನಲಾಗಿದೆ.
ಬಳಿಕ ಅವರನ್ನು ದೇವರ ಕೋಣೆಯ ಬಳಿ ಎಳೆದು ಕೊಂಡು ಹೋಗಿ ಕೆಳಗೆ ಬೀಳಿಸಿ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ 65,000ರೂ. ಮೌಲ್ಯದ ಚಿನ್ನದ ನೆರಿಗುಂಡು ಸರವನ್ನು ಸುಲಿಗೆ ಮಾಡಿ ಪರಾರಿಯಾದನು ಎಂದು ದೂರಲಾಗಿದೆ. ಈ ಘಟನೆಯಿಂದ ಗುಲಾಬಿ ಆಚಾರ್ಯರಿಗೆ ಗಾಯವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.