ಮಂಗಳೂರು: ಶಸ್ತ್ರಚಿಕಿತ್ಸಕ ಡಾ.ಗುಣಚಂದ್ರ ರೈ ನಿಧನ
ಮಂಗಳೂರು, ಅ.12: ದವಡೆ ಹಾಗೂ ಮುಖ ಶಸ್ತ್ರಚಿಕಿತ್ಸಕ ಡಾ. ಗುಣಚಂದ್ರ ರೈ(52) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಡಾ.ಗುಣಚಂದ್ರ ರೈಯವರು ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದರು.
ಮೃತರು ಮಂಗಳೂರು ನಗರದ ವಾಸ್ಲೇನ್ನಲ್ಲಿ ವಾಸಿಸುತ್ತಿದ್ದರು. ತಾಯಿ, ಪತ್ನಿ, ಪುತ್ರಿ, ಸಹೋದರ, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರು ಕರಾವಳಿಯ ಹೆಸರಾಂತ ದಂತ ವೈದ್ಯ ಡಾ.ಎ.ಟಿ.ರೈ ಅವರ ಮೊಮ್ಮಗ. ಡಾ.ಗುಣಚಂದ್ರ ರೈ ಸಂತ ಅಲೋಶಿಯಸ್ ಕಾಲೇಜು ಹಾಗೂ ಎ.ಬಿ.ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದ ‘ಒರಲ್ ಆ್ಯಂಡ್ ಮ್ಯಾಕ್ಸಿಲೊಫೆಶಿಯಲ್’ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಮೃತರ ಅಂತ್ಯಸಂಸ್ಕಾರವು ಅ.13ರಂದು ವಾಸ್ಲೇನ್ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.