ಚಿತ್ರನಟ ಸುದೀಪ್ ಅಭಿಮಾನಿಗೆ ಹಲ್ಲೆ: ನಾಲ್ವರು ಆರೋಪಿಗಳ ಬಂಧನ
ಕುಂದಾಪುರ, ಅ.14: ಚಿತ್ರನಟ ಸುದೀಪ್ ಕುರಿತು ಕೆಟ್ಟದಾಗಿ ಮಾತನಾಡಿ ರುವುದನ್ನು ವಿರೋಧಿಸಿ ವಿನಯ್ ಗುರೂಜಿ ಬಗ್ಗೆ ಸಾಮಾಜಿಕ ಜಾಲತಾಣ ದಲ್ಲಿ ಬಂದ ಸಂದೇಶವನ್ನು ಪೇಸ್ಬುಕ್ನಲ್ಲಿ ಶೇರ್ ಮಾಡಿದ ಸುದೀಪ್ ಅಭಿಮಾನಿ ರತ್ನಾಕರ ಪೂಜಾರಿ (30) ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಚಿಕಲ್ಸಾಲ್ ರಸ್ತೆಯ ನಿವಾಸಿಗಳಾದ ಗುರುರಾಜ್ ಪುತ್ರನ್ (28), ಸಂತೋಷ ಮೊಗವೀರ(30), ಪ್ರದೀಪ್(29), ರವಿರಾಜ್(44) ಎಂಬವರು ಬಂಧಿತ ಆರೋಪಿಗಳು. ಉಳಿದ ಆರೋಪಿಗಳು ತಲೆಮರೆಸಿ ಕೊಂಡಿದ್ದು, ಅವರ ಬಂಧನಕ್ಕೆ ಎರಡು ಪೊಲೀಸ್ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಈ ಹಿಂದೆ ವಿನಯ್ ಗುರೂಜಿ, ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶವನ್ನು ಕೋಟತಟ್ಟು ಬಾರಿಕೆರೆಯ ರತ್ನಾಕರ ಪೂಜಾರಿ ಪೇಸ್ಬುಕ್ನಲ್ಲಿ ಶೇರ್ ಮಾಡಿದ್ದರು. ಇದೇ ವಿಚಾರದಲ್ಲಿ ಅ.13ರಂದು ಸಂಜೆ ವೇಳೆ ಕುಂದಾಪುರದ ಸಂಗಮ್ ಬಳಿ ಗುರುರಾಜ್ ಪುತ್ರನ್, ಸಂತು ಹಾಗೂ ಇತರ 8ರಿಂದ 10 ಮಂದಿ ಕಬ್ಬಿಣದ ರಾಡ್ನ್ನು ಹಿಡಿದುಕೊಂಡು ಬಂದು ರತ್ನಾಕರ ಪೂಜಾರಿಗೆ ಅವಾಚ್ಯ ಶಬ್ದಗಳಿಂದ ಬೈದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರೆಂದು ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಾಮಾಜಿಕ ಜಾಲತಾಣವನ್ನು ಜವಾಬ್ದಾರಿಯುತವಾಗಿ ಹಾಗೂ ವಿವೇ ಚನಾತ್ಮಕವಾಗಿ ಬಳಸದೇ ಇರುವುದರಿಂದ ಇಂತಹ ಅವಘಡಗಳು ಸಂಭವಿ ಸುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಬೇಕಾಗಿ ಹಾಗೂ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಕುರಿತು ಏನಾದರೂ ವಿಷಯಗಳನ್ನು ಪ್ರಚಾರ ಮಾಡಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಪೊಲೀಸ್ ಇಲಾಖೆ ತಿಳಿಸಿದೆ.