ಪರಿಣಾಮಕಾರಿ ಬೋಧನೆಗೆ ತರಬೇತು ಅಗತ್ಯ: ಪಿ.ಮಿತ್ಯಂತ
ಮಣಿಪಾಲ, ಅ.15: ಕಾಲಕಾಲಕ್ಕೆ ಪಾಠ ಪಟ್ಟಿ ಬದಲಾಗುತ್ತದೆ. ಹೊಸ ವಿಷಯಗಳನ್ನು ಬೋಧಿಸಲು ಹೊಸ ವಿಧಾನಗಳನ್ನು ಅಳವಡಿಸುವ ಅಗತ್ಯವಿರುತ್ತದೆ. ಶಿಕ್ಷಕರು ತರಗತಿಯಲ್ಲಿ ತಮ್ಮ ಬೋಧನೆಯನ್ನು ಪರಿಣಾಮಕಾರಿಯಾಗಿರಿಸಲು, ನೂತನ ವಿಷಯ ಮತ್ತು ವಿಧಾನದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿರುತ್ತದೆ. ಆಗ ಮಾತ್ರ ಅವರ ಬೋಧನೆ ಪರಿಣಾಮ ಕಾರಿಯಾಗಲು ಸಾಧ್ಯ ಎಂದು ಸರ್ವ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿ ಪ್ರಭಾಕರ ಮಿತ್ಯಂತ ಅಭಿಪ್ರಾಯಪಟ್ಟಿದ್ದಾರೆ.
ಸೆಲ್ಕೋ ಪೌಂಡೇಶನ್ ಬೆಂಗಳೂರು ಇವರ ಪ್ರಾಯೋಜಕತ್ವ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ನಲ್ಲಿ ಆಯೋಜಿಸಲಾದ 3 ದಿನಗಳ ಗಣಿತ ಕಾರ್ಯಾಗಾರ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತಾಡಿ, ಶಿಕ್ಷಕರು ಗಣಿತ ತರಬೇತಿಯ ಸಂಪೂರ್ಣ ಪ್ರಯೋಜನವನ್ನು ಪಡಕೊಂಡು, ಅವುಗಳನ್ನು ತಮ್ಮ ತರಗತಿಯ ಬೋಧನೆಯಲ್ಲಿ ಅಳವಡಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಉಡುಪಿ ಮತ್ತು ಬ್ರಹ್ಮಾವರ ವಲಯದ ಸುಮಾರು 40 ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಶಿಶಂಕರ, ನಾರಾಯಣ ಅಡಿಗ, ಪ್ರಕಾಶ, ವೀಣಾ ಪಾಲ್ಗೊಂಡರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ವ್ಯವಸ್ಥಾಪಕ ವುನೋಹರ ಕಟ್ಗೇರಿ ವಂದಿಸಿದರು.