ಸಹಾಯಕ ಧರ್ಮಗುರು ಫಾ.ಮಹೇಶ್ ಡಿಸೋಜ ಅಂತ್ಯಸಂಸ್ಕಾರ

Update: 2019-10-15 16:43 GMT

ಶಿರ್ವ, ಅ.15: ಅಕಾಲಿಕವಾಗಿ ಸಾವನಪ್ಪಿದ ಶಿರ್ವ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಹಾಗೂ ಚರ್ಚಿನ ಸಹಾಯಕ ಧರ್ಮ ಗುರು ಫಾ.ಮಹೇಶ್ ಡಿಸೋಜ ಅವರ ಅಂತ್ಯ ಸಂಸ್ಕಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಮಂಗಳವಾರ ಜರಗಿತು.

ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಧರ್ಮಪ್ರಾಂತ್ಯದ ಪರವಾಗಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ಹಾಗೂ ಶಿರ್ವ ಚರ್ಚಿನಲ್ಲಿ ಹಿಂದೆ ಪ್ರಧಾನ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದ ವಂ.ಸ್ಟ್ಯಾನಿ ತಾವ್ರೊ ಶೃದ್ಧಾಂಜಲಿ ಅರ್ಪಿಸಿದರು. ಶಿರ್ವ ಧರ್ಮಕೇಂದ್ರದ ಪರವಾಗಿ ಪಾಲನ ಮಂಡಳಿಯ ಸದಸ್ಯ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಡೋನ್ ಬೊಸ್ಕೊ ಶಾಲೆಯ ಪರವಾಗಿ ಉಪಪ್ರಾಂಶುಪಾಲೆ ಐರಿನ್ ಕಾರ್ಡೋಜಾ, ವಂ.ಮಹೇಶ್ ಅವರ ಕುಟುಂಬದ ಪರವಾಗಿ ಆಸ್ಟಿನ್ ಬಾರ್ಬೋಜಾ ಶೃದ್ಧಾಂಜಲಿ ಸಮರ್ಪಿಸಿದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಯು.ಆರ್.ಸಭಾಪತಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮೋಹನ್ ಆಳ್ವ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್, ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್ ಮೃತರಿಗೆ ಗೌರವ ಸೂಚಿಸಿದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ.ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಮಂಗಳೂರು ಧರ್ಮಪ್ರಾಂತ್ಯದ ಚಾನ್ಸಲರ್ ವಂ.ಹೆನ್ರಿ ಸಿಕ್ವೇರಾ, ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ.ಸ್ಟ್ಯಾನಿ ಬಿ.ಲೋಬೊ, ಶಿರ್ವ ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ, ಸಹಾಯಕ ಧರ್ಮ ಗುರು ವಂ.ಅಶ್ವಿನ್ ಅರಾನ್ಹ, ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ.ಡಾ.ಲಾರೆನ್ಸ್ ಡಿಸೋಜ, ಅತ್ತೂರು ಬೆಸಿಲಿಕಾದ ರೆಕ್ಟರ್ ವಂ.ಜೋರ್ಜ್ ಡಿಸೋಜ, ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೋನ್ಸಾ, ಶಿರ್ವ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯದರ್ಶಿ ಲೀನಾ ಮಚಾದೊ, ಪದಾಧಿಕಾರಿಗಳಾದ ಮೆಲ್ವಿನ್ ಆರಾನ್ಹಾ, ಮೆಲ್ವಿನ್ ಡಿಸೋಜಾ, ನೊರ್ಬಟ್ ಮಚಾದೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News