ಉಡುಪಿ ಮೂಲದ ಹೊಟೇಲ್ ಕಾರ್ಮಿಕ ನಾಪತ್ತೆ
ಮಂಗಳೂರು, ಅ.16: ನಗರದ ಹೋಟೆಲ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನೋರ್ವ ಸಂಬಂಧಿಕರೊಬ್ಬರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ವಾಪಸಾಗದೇ ನಾಪತ್ತೆಯಾದ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ಜಿಲ್ಲೆಯ ಶಿರ್ವ ಸಮೀಪದ ನಿವಾಸಿ ಅಶೋಕ್ (30) ನಾಪತ್ತೆಯಾದ ಕಾರ್ಮಿಕ.
ಈತ ನಗರದ ಬೆಂದೂರ್ವೆಲ್ನ ಖಾಸಗಿ ಹೊಟೇಲ್ವೊಂದರಲ್ಲಿ ಸಪ್ಲೈಯರ್ಆಗಿ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಮಾಡುತ್ತಿದ್ದ. ಅ.14ರಂದು ಬೆಳಗ್ಗೆ ನಂತೂರಿನಲ್ಲಿರುವ ತನ್ನ ಮಾವನ ಮನೆಗೆ ಹೋಗುವುದಾಗಿ ಹೇಳಿದ್ದ ಅಶೋಕ್ ನಾಪತ್ತೆಯಾಗಿದ್ದಾರೆ. ಈತ ಕಳೆದ 5-6 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ನಗರದ ಆಸ್ಪತ್ರೆಗಳಲ್ಲಿ ಆಗಾಗ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಸಹೋದರಿ ದೂರು ನೀಡಿದ್ದಾರೆ.
ಚಹರೆ: 5.6 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದುಂಡನೆಯ ಮುಖ ಹೊಂದಿದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಬಣ್ಣದ ಉದ್ದತೋಳಿನ ಶರ್ಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಮಾತನಾಡುತ್ತಾರೆ.
ನಾಪತ್ತೆಯಾದ ವ್ಯಕ್ತಿಯ ಸುಳಿವು ದೊರೆತಲ್ಲಿ ಮಂಗಳೂರು ಕದ್ರಿ ಪೊಲೀಸ್ ಠಾಣೆ (0824- 2220520) ಸಂಪರ್ಕಿಸಬಹುದಾಗಿದೆ.