ಚಿಕಿತ್ಸೆಗೆ ಹಣ ವಿದ್ ಡ್ರಾ ಮಾಡಲು ಸಾಧ್ಯವಾಗದೆ ತಂದೆಯನ್ನು ಕಳೆದುಕೊಂಡ ಪಿಎಂಸಿ ಬ್ಯಾಂಕ್ ಗ್ರಾಹಕ
ಹೊಸದಿಲ್ಲಿ, ಅ.18: ಹೃದಯದ ಶಸ್ತ್ರಚಿಕಿತ್ಸೆಗೆ ಹಣ ವಿದ್ ಡ್ರಾ ಮಾಡಲು ಸಾಧ್ಯವಾಗದೆ ಪಂಜಾಬ್ & ಮಹಾರಾಷ್ಟ್ರ ಬ್ಯಾಂಕ್ ಗ್ರಾಹಕರೊಬ್ಬರು ತನ್ನ ತಂದೆಯನ್ನು ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಮುರಳೀಧರ್ ಧರಾ ಎಂದು ಗುರುತಿಸಲಾಗಿದೆ. ಹೃದಯಾಘಾತದಿಂದ ಇವರು ಮೃತಪಟ್ಟಿದ್ದಾರೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಕಾರಣ ತನ್ನ ತಂದೆ ಮೃತಪಟ್ಟಿದ್ದಾರೆ ಎಂದು ಮುರಳೀಧರ್ ಧರಾರ ಪುತ್ರ ಪ್ರೇಮ್ ಧರಾ ಆರೋಪಿಸಿದ್ದಾರೆ.
ತನ್ನ ಪಿಎಂಸಿ ಬ್ಯಾಂಕ್ ಖಾತೆಯಲ್ಲಿ 80 ಲಕ್ಷ ರೂ. ಹಣವಿತ್ತು. ಗ್ರಾಹಕರಿಗೆ ಹಣ ವಿದ್ ಡ್ರಾಗೆ ನಿರ್ಬಂಧ ಹೇರಿದ ಕಾರಣ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಕೆಲ ಸಮಯದಿಂದ ತನ್ನ ತಂದೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸುವಂತೆ ಸೂಚಿಸಿದ್ದರು ಎಂದು ಪ್ರೇಮ್ ಧರಾ ಹೇಳಿದ್ದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಪಿಎಂಸಿ ಹಗರಣದ ವಿರುದ್ಧ ಪ್ರತಿಭಟನೆ ನಡೆಸಿದ ಪಿಎಂಸಿ ಗ್ರಾಹಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.