ನೀರಿನ ದರ ಏರಿಕೆ: ಸಿಪಿಎಂ ವಿರೋಧ
Update: 2019-10-18 17:20 GMT
ಮಂಗಳೂರು, ಅ.18: ಮಂಗಳೂರು ಮಹಾನಗರ ಪಾಲಿಕೆಯು ಕಳೆದ ಏಪ್ರಿಲ್ ತಿಂಗಳಿನಲ್ಲಿ ನೀರಿನ ದರ ಏರಿಕೆ ಮಾಡಿರುವುದನ್ನು ವಿರೋಧಿಸಿದ ಸಿಪಿಎಂ ಪಂಜಿಮೊಗರು ವಾರ್ಡ್ ಸಮಿತಿಯು, ಕೂಡಲೇ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಶುಕ್ರವಾರ ಮನವಿ ಸಲ್ಲಿಸಿತು.
ಹಿಂದಿನ ದರಕ್ಕಿಂತ ಮೂರರಿಂದ ಐದು ಪಟ್ಟು ದರ ಹೆಚ್ಚಳ ಮಾಡಿರುವುದು ನ್ಯಾಯವಲ್ಲ. ಕನಿಷ್ಠ ಮಿತಿಯಲ್ಲೂ ಕಡಿತಗೊಳಿಸಲಾಗಿದೆ. ಪಾಲಿಕೆಯೊಳಗೆ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಇರುವ ಸಮಯವನ್ನು ಬಳಸಿಕೊಂಡು ಮನಸ್ಸೋ ಇಚ್ಛೆ ದರ ಹೆಚ್ಚಿಸಲಾಗಿದೆ ಎಂದು ದೂರಿದರು.
ಮೂರು ತಿಂಗಳುಗಳ ಕಾಲ ಬಿಲ್ನ್ನು ನೀಡದೇ ಇದೀಗ ಏಕಕಾಲದಲ್ಲಿ ಬಿಲ್ ನೀಡಲಾಗುತ್ತಿದೆ. ಇದರಿಂದ ಕನಿಷ್ಠ ಬಳಕೆ ರೀಡಿಂಗ್ ಮಾನದಂಡವನ್ನು ತಪ್ಪಾಗಿ ಅನುಸರಿಸಲಾಗುತ್ತಿದೆ. ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಪಕ್ಷದ ಮುಖಂಡರಾದ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಎ. ಅಹ್ಮದ್ ಬಶೀರ್, ನವೀನ್ ಡಿಸೋಜ, ನೌಷದ್, ಚರಣ್ ಶೆಟ್ಟಿ ಉಪಸ್ಥಿತರಿದ್ದರು.