ಬಜ್ಪೆ: ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

Update: 2019-10-19 14:55 GMT

ಬಜ್ಪೆ, ಅ.19: ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನ ಸಾಮಾನ್ಯರಿಗೆ ವಿಶ್ವಾಸಾರ್ಹವಾಗಿರಬೇಕು. ಆಧುನಿಕ ಕಟ್ಟಡಕ್ಕಿಂತಲೂ ಮುಖ್ಯವಾಗಿ ಕೇಂದ್ರದಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ವರ್ಗ ಕರ್ತವ್ಯನಿಷ್ಠರಾಗಬೇಕು. ರೋಗಿಗಳಿಗೆ ನೆಮ್ಮದಿಯ ವಾತಾವರಣದೊಂದಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬಜ್ಪೆಯಲ್ಲಿ ನಿರ್ಮಿಸಲಾದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಉಸ್ತುವಾರಿ ಸಚಿವ, ಹಾಲಿ ಶಾಸಕ ಯು.ಟಿ. ಖಾದರ್ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುತ್ತಿ ದ್ದಾರೆ. ಇಲ್ಲಿ ಸಣ್ಣಪುಟ್ಟ ರೋಗಗಳಿಗೆ ಔಷಧಿ ಇಲ್ಲ ಎಂದಾಗಬಾರದು. ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು. ರೋಗ ಬರದಂತೆ ಜನಜಾಗೃತಿಗೆ ಹೆಚ್ಚು ಮಹತ್ವ ನೀಡಬೇಕು. ವೈದ್ಯರು ಮತ್ತು ಸಿಬ್ಬಂದಿ ವರ್ಗದ ‘ಟೆನ್ಶನ್’ ರೋಗಿಗಳ ಮೇಲೆ ಹೇರಬಾರದು ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ಅತ್ಯಾಧುನಿಕ ಸವಲತ್ತು ಇರುವಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಇದು ‘ಸಮುದಾಯ ಕೇಂದ್ರ’ವಾಗಿ ಮೇಲ್ದರ್ಜೆಗೇರಬೇಕು ಮತ್ತು 24*7 ತಾಸುಗಳಲ್ಲಿ ಸೇವೆ ಸಿಗುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ವೈದ್ಯರೆಂಬುದು ಹುದ್ದೆಯಲ್ಲ, ಅದು ಪ್ರಾಮಾಣಿಕ ಸೇವೆಗೆ ಹೆಸರಾದ ಸೇವಕ ಎಂಬ ಭಾವನೆ ವೈದ್ಯರಲ್ಲಿರಬೇಕು. ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ವರ್ಗ ಪ್ರಾಮಾಣಿಕ ಹಾಗೂ ಪಕ್ಷಪಾತರಹಿತ ಕರ್ತವ್ಯ ನಿರ್ವಹಿಸಬೇಕು. ಯಾಕೆಂದರೆ, ಇಲ್ಲಿಗೆ ಬರುವವರು ಬಡವರು, ಅಶಕ್ತರಾಗಿರುತ್ತಾರೆ ಎಂದರು.

ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನಿಯರಿಂಗ್ ಉಪ ವಿಭಾಗ (ಮಂಗಳೂರು) ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಸದಸ್ಯರಾದ ಜನಾರ್ದನ ಗೌಡ, ವಸಂತಿ ಕಿಶೋರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ತಾಪಂ ಸದಸ್ಯರಾದ ಉಷಾ ಸುವರ್ಣ, ವಿಶ್ವನಾಥ ಶೆಟ್ಟಿ, ಶಶಿಕಲಾ ಶೆಟ್ಟಿ, ಬಜ್ಪೆ ಗ್ರಾಪಂ ಅಧ್ಯಕ್ಷೆ ರೋಝಿ ಮಥಾಯಿಸ್,ಕಂದಾವರ ಗ್ರಾಪಂ ಅಧ್ಯಕ್ಷ ವಿಜಯಾ ಗೋಪಾಲ ಸುವರ್ಣ, ಪಡುಪೆರಾರ ಗ್ರಾಪಂ ಅಧ್ಯಕ್ಷೆ ಶಾಂತಾ ಎಂ., ಜೋಕಟ್ಟೆ ಗ್ರಾಪಂ ಅಧ್ಯಕ್ಷೆ ಪ್ರೆಸಿಲ್ಲಾ ಮೊಂತೆರೆ, ಪೆರ್ಮುದೆ ಗ್ರಾಪಂ ಅಧ್ಯಕ್ಷೆ ಸರೋಜಾ ಪೂಜಾರಿ ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ ರಾಮಕೃಷ್ಣ ಸ್ವಾಗತಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾದಿಕಾರಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ಬಜ್ಪೆಪ್ರಾಥಮಿಕ ಕೇಂದ್ರದ ಕಟ್ಟಡದಲ್ಲಿ ಔಷಧಿ ಉಗ್ರಾಣ, ಔಷಧಿ ವಿತರಣಾ ವಿಭಾಗ, ಹೆರಿಗೆ ವಿಭಾಗ, ಶುಶ್ರೂಷಕಿ ಕೊಠಡಿ, ಶೀತಲೀಕರಣ ಕೊಠಡಿ, ತ್ಯಾಜ್ಯ ನಿರ್ವಹಣಾ ಕೊಠಡಿ, ಶಸ್ತ್ರಚಿಕಿತ್ಸಾ ವಿಭಾಗದಂತಹ ಮಹತ್ವದ ವಿಭಾಗಗಳು ಇವೆ. ಸುಮಾರು 2.20 ಎಕರೆ ಜಮೀನಿನಲ್ಲಿ 1.45 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News