ಉಡುಪಿ: ಪ್ರಾಕೃತಿಕ ವಿಕೋಪ ನಿಧಿಯಡಿ 64 ಸಂತ್ರಸ್ತರಿಗೆ ಪರಿಹಾರ ವಿತರಣೆ

Update: 2019-10-21 16:23 GMT

ಉಡುಪಿ, ಅ.21: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆರೆ ಪ್ರವಾಹದಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡ ಮತ್ತು ಭಾಗಶಃ ಹಾನಿಗೊಳಗಾದ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ಮನೆ ಪುನರ್ ನಿರ್ಮಾಣದ ಆದೇಶ ಪ್ರತಿ ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣಾ ಕಾರ್ಯಕ್ರಮವು ಸೋಮವಾರ ಉಡುಪಿ ತಾಪಂ ಸಭಾಂಗಣದಲ್ಲಿ ಜರಗಿತು.

ಈ ಸಂದರ್ಭದಲ್ಲಿ 76 ಮಂದಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ಮತ್ತು ಪ್ರಾಕೃತಿಕ ವಿಕೋಪ ನಿಧಿಯಡಿ ಸಂಪೂರ್ಣ ಮನೆ ಕಳೆದುಕೊಂಡ 12 ಮಂದಿಗೆ ತಲಾ 5 ಲಕ್ಷ ರೂ., ಶೇ.25ಕ್ಕಿಂತ ಹೆಚ್ಚು ನಷ್ಟ ಸಂಭವಿಸಿದ 16 ಮಂದಿಗೆ ತಲಾ 1 ಲಕ್ಷ ರೂ. ಹಾಗೂ ಶೇ.25ಕ್ಕಿಂತ ಕಡಿಮೆ ಹಾನಿ ಸಂಭವಿಸಿದ 36 ಸಂತ್ರಸ್ತರಿಗೆ ತಲಾ 25 ಸಾವಿರ ರೂ. ಚೆಕ್‌ನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಿತರಿಸಿದರು.

ರಾಜ್ಯ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆಯಡಿ ಹೆಣ್ಣು ಮಗುವಿನ ಹೆಸರಿನಲ್ಲಿ 19,300 ರೂ. ಎಲ್ಐಸಿ ಪಾಲಿಸಿ ಮಾಡಿಸುತ್ತಿದ್ದು, ಮಗುವಿಗೆ 18 ವರ್ಷ ತುಂಬಿದ ಬಳಿಕ ಒಂದು ಲಕ್ಷ ರೂ. ಲಭಿಸುತ್ತದೆ. ಇದು ಹೆಣ್ಣುಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ರಘುಪತಿ ಭಟ್ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂದರ್ಭದಲ್ಲಿ ಎಲ್ಲವನ್ನು ಕಾನೂನು ದೃಷ್ಠಿಯಿಂದ ನೋಡದೆ, ಮಾನವೀಯ ನೆಲೆಯಲ್ಲಿ ಪರಿಹಾರ ವಿತರಣೆಗೆ ಅಧಿಕಾರಿಗಳು ಮುಂದಾಗಬೇಕು. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರವು ಕಾಮಗಾರಿಗೆ ಅನುಗುಣವಾಗಿ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಇವರಿಗೆ ಪ್ರತಿ ತಿಂಗಳು 5 ಸಾವಿರ ರೂ.ನಂತೆ 10 ತಿಂಗಳವರೆಗೆ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಬಾಡಿಗೆ ಹಣ ಕೂಡ ಸರಕಾರ ಮಂಜೂರು ಮಾಡಲಿದೆ ಎಂದರು.

ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಬೈಲಕೆರೆ, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯರಾದ ನಳಿನಿ ಪ್ರದೀಪ್ ರಾವ್, ಡಾ.ಸುನೀತಾ ಶೆಟ್ಟಿ, ವಸಂತಿ ಪೂಜಾರಿ, ಗೋಪಿ ಕೆ.ನಾಯ್ಕ್, ದಿನಕರ ಹೇರೂರು, ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೇಶವ ಶೆಟ್ಟಿ, ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News