ಬಂಟ್ವಾಳ: ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

Update: 2019-10-21 18:28 GMT

ಬಂಟ್ವಾಳ, ಅ. 21: ದ.ಕ.ಜಿಲ್ಲೆಯಲ್ಲಿ 94ಸಿ ಯೋಜನೆಯ 1,07,242 ಅರ್ಜಿಗಳಲ್ಲಿ 40,992 ಹಕ್ಕುಪತ್ರ ಹಾಗೂ 94ಸಿಸಿ ಯೋಜನೆಯಲ್ಲಿ 40,245 ಅರ್ಜಿಗಳಲ್ಲಿ 23,609 ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ಎಂದು ರಾಜ್ಯ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಅವರು ಸೋಮವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬಂಟ್ವಾಳ ತಾಲೂಕಿನ 94ಸಿ ಹಾಗೂ 94ಸಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ರಾಜ್ಯದ ನಿವೇಶನ ರಹಿತ ಕುಟುಂಬಗಳಿಗೆ ಭೂಮಿ ನೀಡಲು ರಾಜ್ಯ ಸರಕಾರ ಬದ್ಧವಾಗಿದ್ದು, ಮುಂದಿನ ನವೆಂಬರ್ ಅಂತ್ಯದೊಳಗೆ ರಾಜ್ಯದ ಸುಮಾರು 15 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ 94ಸಿ ಹಾಗೂ 94ಸಿಸಿ ಯೋಜನೆಯ ಹಕ್ಕುಪತ್ರ ವಿತರಣೆಗೆ ಆದೇಶಿಸಲಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸಾಮಾನ್ಯ ಜನರು ತುಂಡು ಭೂಮಿಯಲ್ಲಿ ನೆಲೆಸಲು ಅಲೆದಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ಸರಕಾರ ವಿಶೇಷ ಮುತುವರ್ಜಿ ವಹಿಸಿದ್ದು, ನಿವೇಶನ ರಹಿತರಿಗೆ ಶೀಘ್ರ  ನಿವೇಶನ ಕಲ್ಪಿಸಲಿದೆ. ಅದಲ್ಲದೆ, ಅರಣ್ಯ ಪ್ರದೇಶದಲ್ಲಿ ಸುದೀರ್ಘ ಕಾಲದಿಂದ ವಾಸ್ತವ್ಯವಿರುವ ಜನರಿಗೆ ಆದೇ ಜಮೀನಿಗೆ ಹಕ್ಕುಪತ್ರ ನೀಡುವಂತೆ ಆದೇಶಿಸಲಾಗಿದೆ. ಅರಣ್ಯಪ್ರದೇಶಕ್ಕೆ ಜಾಗದ ಅವಶ್ಯಕತೆಯಿದ್ದರೆ ಅದಕ್ಕೆ  ಪರ್ಯಾಯವಾಗಿ ಕಂದಾಯ ಇಲಾಖೆಯ ಜಮೀನು ಕಾಯ್ದಿರಿಸುವ ಮೂಲಕ ಅವರಿಗೆ ನ್ಯಾಯ ಒದಗಿಸಲಿದೆ ಸಚಿವರು ಎಂದರು.                             
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಬಂಟ್ವಾಳ ತಾಲೂಕು ಕೇಂದ್ರಕ್ಕೆ ಹೊಸ ಆಯಾಯವನ್ನು ನೀಡುವ ನಗರ ಸುಂದರೀಕರಣ ಯೋಜನೆಗೆ ಒಂದೂವರೆ ವರ್ಷಗಳ ಸತತ ಪ್ರಯತ್ನದ ಫಲವಾಗಿ ಪ್ರಸ್ತುತ ಚಾಲನೆಯ ಹಂತಕ್ಕೆ ತಲುಪಿದೆ. ಸುಮಾರು 22 ಕೋ.ರೂ.ಗಳ ಯೋಜನೆಗೆ ಸಿಎಂ ಅವರ 5 ಕೋ.ರೂ.ಗಳ ವಿಶೇಷ ಅನುದಾನದ ಜೊತೆಗೆ ವಿವಿಧ ಸಂಸ್ಥೆಗಳ ಸಹಕಾರ ಲಭಿಸಿದೆ. ಕಳೆದ ಒಂದೂವರೆ ವರ್ಷದಲ್ಲಿ ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆ 100 ಕೋ.ರೂ.ಗಳಿಗೂ ಅಧಿಕ ಅನುದಾನವನ್ನು ತರಿಸಲಾಗಿದೆ ಎಂದರು. 

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಡವರಿಗೆ ನಿವೇಶನ ನೀಡುವುದು ಪುಣ್ಯದ ಕಾರ್ಯವಾಗಿದೆ. ಡೀಮ್ಡ್ ಫಾರೆಸ್ಟ್, ಕುಮ್ಕಿ ಹಕ್ಕು, ಮೂಲಗೇಣಿ, ಗೇರುಲೀಝ್ ಮೊದಲಾದ ಭೂಮಿ ಹಕ್ಕಿನ ಗೊಂದಲಗಳ ಕುರಿತು ಸರಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕೆಂದರು. ಜೊತೆಗೆ ದ.ಕ.ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ ವೇಗ ಪಡೆಯುವ ನಿಟ್ಟಿನಲ್ಲಿ ಕಂದಾಯ ಸಚಿವರು ಸೂಕ್ತ ನಿರ್ದೇಶನ ನೀಡಬೇಕಿದೆ ಎಂದರು. 

ದ.ಕ.ಸಂಸದ ನಳಿನ್‍ ಕುಮಾರ್ ಕಟೀಲು ಮಾತನಾಡಿ, ಪ್ರಸ್ತುತ ರಾಜ್ಯ ಸರಕಾರದಲ್ಲಿ ಕೇಳಿದ್ದನ್ನು ಕೊಡುವ ಕಾಮಧೇನಿನಂತೆ ಸಿಎಂ ಬಿಎಸ್‍ವೈ ಅವರು ಕೆಲಸ ಮಾಡುತ್ತಿದ್ದರೆ, ದ.ಕ.ಜಿಲ್ಲೆಯಲ್ಲಿ ಸಚಿವ ಕೋಟ ಅವರು ಕಲ್ಪವೃಕ್ಷದಂತೆ ಕೆಲಸ ಮಾಡುತ್ತಿದ್ದಾರೆ. ಕಂದಾಯ ಸಚಿವರು ಪ್ರಾಪರ್ಟಿ ಕಾರ್ಡ್ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮಂಗಳೂರಿನ ಜನತೆ ನಿಟ್ಟುಸಿರು ಬಿಡುವಂತೆ ಮಾಡಿರುವುದಕ್ಕೆ ಸಚಿವರನ್ನು ಅಭಿನಂದಿಸಿದರು. 

ವೇದಿಕೆಯಲ್ಲಿ ಶಾಸಕರಾದ ಡಿ.ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಮಂಜುಳಾ ಮಾವೆ, ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಕಮಲಾಕ್ಷಿ ಪೂಜಾರಿ, ರವೀಂದ್ರ ಕಂಬಳಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಧನಲಕ್ಷ್ಮಿ ಸಿ.ಬಂಗೇರ, ದ.ಕ.ಜಿಪಂ ಸಿಇಒ ಡಾ. ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿ ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು. 

ಈ ಸಂದರ್ಭ ತಾಲೂಕಿನ ಸುಮಾರು 734 ಮಂದಿ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿಯಲ್ಲಿ ಹಕ್ಕುಪತ್ರ ವಿತರಿಸಲಾಯಿತು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಫಲಾನುಭವಿಗಳ ವಿವರ ನೀಡಿದರು. ತಾಪಂ ಇಒ ರಾಜಣ್ಣ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಡಿಸಿ ಖಾತೆಗೆ 35 ಕೋ.ರೂ.: 
ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಯಶಸ್ವಿ ರೀತಿಯಲ್ಲಿ ನಿಭಾಯಿಸಿದ್ದು, ಸುಮಾರು 250 ಕೋ.ರೂ.ಗಳಲ್ಲಿ ಪ್ರತಿ ಸಂತ್ರಸ್ಥ ಕುಟುಂಬಗಳಿಗೆ 10 ಸಾವಿರ ರೂ.ಗಳ ತತ್‍ಕ್ಷಣದ ಪರಿಹಾರ ನೀಡಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿ, ಈಗಾಗಲೇ 50 ಶೇ.ಕ್ಕೂ ಅಧಿಕ ಮಂದಿಗೆ 1 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಜತೆಗೆ ಮಧ್ಯವರ್ತಿಗಳ ಕಾಟ ತಪ್ಪಿಸಲು ಪರಿಹಾರ ಧನವನ್ನು ಚೆಕ್ಕಿನ ಬದಲು ಆರ್‍ಟಿಜಿಎಸ್ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ದ.ಕ.ಜಿಲ್ಲೆಯ ಪ್ರವಾಹ ಸಂತ್ರಸ್ಥರ ನೆರವಿಗಾಗಿ ಈಗಾಗಲೇ 35 ಕೋ.ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಚಿವ ಅಶೋಕ್ ಹೇಳಿದರು. 

ನಮ್ಮ ಸರಕಾರ ಅಚಲವಾಗಿದ್ದು, ಛಲದಿಂದ ಮುಂದಿನ ಮೂರುವರೇ ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಸರಕಾರ ಜನಪರವಾಗಿ ಕಾರ್ಯನಿರ್ವಹಿಸಲಿದೆ. 
ಆರ್.ಆಶೋಕ್, ಕಂದಾಯ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News