ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ನಾಲ್ಕನೇ ಬಾರಿ ಸಯನೈಡ್ ಮೋಹನ್ಗೆ ಮರಣದಂಡನೆ
ಮಂಗಳೂರು, ಅ. 24: ಬಂಟ್ವಾಳ ತಾಲೂಕು ಬಾಳೆಪುಣಿಯ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸಯನೈಡ್ ನೀಡಿ ಕೊಲೆ ಮಾಡಿದ ಪ್ರಕರಣದಲ್ಲಿ ಸಯನೈಡ್ ಮೋಹನ್ (56)ಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.
ಈ ಯುವತಿಯ ಕೊಲೆ ಪ್ರಕರಣದ ಆರೋಪ ಸಾಬೀತಾಗಿದೆ ಎಂಬುದಾಗಿ ಅ.22ರಂದು ನ್ಯಾಯಾಧೀಶರಾದ ಸಯಿದುನ್ನೀಸಾ ಅವರು ತೀರ್ಮಾನಕ್ಕೆ ಬಂದು ಶಿಕ್ಷೆಯ ಪ್ರಮಾಣದ ಘೋಷಣೆಯನ್ನು ಅ.24ಕ್ಕೆ ನಿಗದಿ ಪಡಿಸಿದ್ದರು.
ಶಿಕ್ಷೆಯ ಬಗ್ಗೆ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಕೊಲೆ ಅಪರಾಧಕ್ಕಾಗಿ (ಐಪಿಸಿ 302) ಹೈಕೋರ್ಟಿನ ದೃಢೀಕರಣದೊಂದಿಗೆ ಆರೋಪಿ ಮೋಹನ್ನಿಗೆ ಸಾಯುವ ತನಕ ಕುಣಿಕೆ ಹಾಕಬೇಕು ಎಂಬುದಾಗಿ ತೀರ್ಪು ನೀಡಿದರು.
ಶಿಕ್ಷೆಯ ವಿವರ: ಕೊಲೆ (ಐಪಿಸಿ ಸೆ. 302) ಆರೋಪಕ್ಕಾಗಿ ಹೈಕೋರ್ಟಿನ ದೃಢೀಕರಣದೊಂದಿಗೆ ಮರಣದಂಡನೆ, ಅಪಹರಣ ಆರೋಪಕ್ಕೆ (ಐಪಿಸಿ 366) 10 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ವರ್ಷ ಸಾದಾ ಸಜೆ, ಅತ್ಯಾಚಾರ ಆರೋಪಕ್ಕೆ (ಐಪಿಸಿ 376) 7 ವರ್ಷ ಕಠಿನ ಸಜೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ವರ್ಷ ಸಾಮಾನ್ಯ ಸಜೆ, ವಿಷ ಪದಾರ್ಥ (ಸಯನೈಡ್) ಉಣಿಸಿದ ಆರೋಪಕ್ಕೆ (ಐಪಿಸಿ 328) 10 ವರ್ಷ ಕಠಿಣ ಸಜೆ ಮತ್ತು 5000 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಸಜೆ, ಚಿನ್ನಾಭರಣ ಸುಲಿಗೆ ಆರೋಪಕ್ಕೆ (ಐಪಿಸಿ 392) 5 ವರ್ಷ ಕಠಿನ ಸಜೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲೆ ತಪ್ಪಿದರೆ 1 ವರ್ಷ ಸಾದಾ ಸಜೆ, ವಿಷ ಉಣಿಸಿ ಸುಲಿಗೆ ಮಾಡಿದ ಆರೋಪಕ್ಕೆ (ಐಪಿಸಿ 394) 10 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ 2 ವರ್ಷ ಸಾದಾ ಶಿಕ್ಷೆ, ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಆರೋಪಕ್ಕೆ (ಐಪಿಸಿ 417) 1 ವರ್ಷ ಕಠಿನ ಸಜೆ, ಸಾಕ್ಷ್ಯ ನಾಶ ಆರೋಪಕ್ಕೆ (ಐಪಿಸಿ 201) 7 ವರ್ಷ ಕಠಿಣ ಸಜೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ವರ್ಷ ಸಾಮಾನ್ಯ ಶಿಕ್ಷೆಯನ್ನು ಅನುಭವಿಸ ಬೇಕು.
ಎಲ್ಲಾ ಶಿಕ್ಷೆಗಳನ್ನು ಏಕ ಕಾಲದಲ್ಲಿ ಅನುಭವಿಸಬೇಕು ಹಾಗೂ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟು ದೃಢೀಕರಿಸಿದರೆ ಈ ಶಿಕ್ಷೆಯಲ್ಲಿ ಉಳಿದೆಲ್ಲ ಶಿಕ್ಷೆಗಳನ್ನು ಅಂತರ್ಗತ ಮಾಡಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಮೋಹನ್ನಿಂದ ಕೊಲೆಯಾದ ಯುವತಿಗೆ ಓರ್ವ ತಂಗಿ ಮಾತ್ರ ಇದ್ದು, ಆಕೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸರಕಾರ ಪರಿಹಾರವನ್ನು ಕೂಡಾ ನೀಡಬೇಕೆಂದು ನ್ಯಾಯಾಧೀಶರಾದ ಸಯಿದುನ್ನೀಸಾ ಅವರು ಆದೇಶಿಸಿದ್ದಾರೆ.
17 ಪ್ರಕರಣಗಳಲ್ಲಿ ನಾಲ್ಕರಲ್ಲಿ ಮರಣದಂಡನೆ ಶಿಕ್ಷೆ
ಇದು ಸಯನೈಡ್ ಮೋಹನ್ನ 17ನೇ ಪ್ರಕರಣವಾಗಿದ್ದು, ಇನ್ನೂ ಮೂರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದ 4ನೇ ಪ್ರಕರಣ ಇದಾಗಿದೆ. ಈ ಹಿಂದಿನ 3 ಪ್ರಕರಣಗಳಲ್ಲಿ ಹೈಕೋರ್ಟ್ ಒಂದು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ 5 ವರ್ಷಗಳ ಕಠಿನ ಶಿಕ್ಷೆಗೆ ಇಳಿಸಿದೆ. ಒಂದು ಪ್ರಕರಣದಲ್ಲಿ ಮಾತ್ರ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಶಾಂತ ಚಿತ್ತನಾಗಿ ತೀರ್ಪು ಆಲಿಸಿದ ಮೋಹನ್
ಸಯನೈಡ್ ಮೋಹನ್ ಪ್ರಸ್ತುತ ಬೆಳಗಾವಿಯ ಹಿಂಡಲ್ಗಾ ಜೈಲಿನಲ್ಲಿದ್ದು, ಅಲ್ಲಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆ ನಡೆಸಲಾಯಿತು. ಬೆಳಗ್ಗೆ ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ಆರೋಪಿ ಮರಣ ದಂಡನೆ ಶಿಕ್ಷೆಗೆ ಅರ್ಹ ಎಂದು ವಾದ ಮಂಡಿಸಿದ್ದರು. ಮಧ್ಯಾಹ್ನ ಬಳಿಕ ನ್ಯಾಯಾಧೀಶರು ಮರಣ ದಂಡನೆ ಶಿಕ್ಷೆಯನ್ನು ಪ್ರಕಟಿಸುವಾಗ ಆರೋಪಿ ಮೋಹನ್ ಯಾವುದೇ ಪ್ರತಿಕ್ರಿಯೆ ತೋರಿಸಿಲ್ಲ; ಶಾಂತ ಚಿತ್ತನಾಗಿ ತೀರ್ಪನ್ನು ಆಲಿಸಿದ್ದನು.
ಪ್ರಕರಣದ ಹಿನ್ನೆಲೆ: ಬಾಳೆಪುಣಿಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಯುವತಿ 2005 ಅ.21ರಂದು ಅಂಗನವಾಡಿ ಸಭೆ ಹಾಗೂ ವೇತನಕ್ಕಾಗಿ ಬಿ.ಸಿ.ರೋಡ್ಗೆ ಬಂದಿದ್ದಾಗ ಅಲ್ಲಿನ ಬಸ್ ನಿಲ್ದಾಣದಲ್ಲಿ ಮೋಹನ್ಗೆ ಆಕೆಯ ಪರಿಚಯವಾಗಿತ್ತು. ತನ್ನನ್ನು ಆನಂದ ಎಂದು ಪರಿಚಯಿಸಿದ ಮೋಹನ್ ತಾನು ಆಕೆಯ ಜಾತಿಯವನೇ ಆಗಿದ್ದು, ಮದುವೆ ಆಗುವುದಾಗಿ ನಂಬಿಸಿದ್ದ.
ಆಕೆಯೊಂದಿಗೆ ಎಲ್ಲಾ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ ಯುವತಿ 2005 ಅ.21ರಂದು ಸಹೋದ್ಯೋಗಿಗಳೊಂದಿಗೆ ಶೃಂಗೇರಿಗೆ ಪಿಕ್ನಿಕ್ಗೆ ಹೋಗುವುದಾಗಿ ತಿಳಿಸಿ ಬೆಳಗ್ಗೆ ಬಿ.ಸಿ.ರೋಡ್ಗೆ ಬಂದಿದ್ದು, ಆಕೆಯನ್ನು ಬಸ್ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ. ಅಲ್ಲಿ ಇಬ್ಬರೂ ಲಾಡ್ಜ್ನಲ್ಲಿ ಕೊಠಡಿ ಪಡೆದು ತಂಗಿದ್ದರು. ರಾತ್ರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಮರುದಿನ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ಹೇಳಿ ಸಯನೈಡ್ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಕುಸಿದು ಬಿದ್ದಿದ್ದಳು.
ಅಲ್ಲಿದ್ದವರು ತತ್ಕ್ಷಣ ಆಕೆಯನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಅ.27ರಂದು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರು ಯಾರೂ ಬಾರದ ಕಾರಣ ಅಲ್ಲಿಯೇ ಅಂತ್ಯ ಕ್ರಿಯೆ ನಡೆಸಲಾಗಿತ್ತು. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಸಯನೈಡ್ ಸೇವಿಸಿರುವುದು ದೃಢಪಟ್ಟಿತ್ತು.
ಮೋಹನ್ ಬಳಿಕ ಲಾಡ್ಜ್ಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ. ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ. ಯುವತಿಯ ಮನೆಯವರು ಎಲ್ಲ ಕಡೆ ಹುಡುಕಾಡಿದ್ದರು. ಅಂಗನವಾಡಿ ಸಮಿತಿಯ ಅಧ್ಯಕ್ಷರು ಈಕೆ ವ್ಯಕ್ತಿಯೋರ್ವನ ಜತೆ ಬಸ್ಗೆ ಹತ್ತುವುದನ್ನು ನೋಡಿದ್ದರು. ಅ.25ರಂದು ಮನೆಯವರು ಕೊಣಾಜೆ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.
2009ರ ಸೆ.21ರಂದು ಬಂಧಿತ ಮೋಹನ್ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾಗ ಬಾಳೆಪುಣಿಯ ಯುವತಿಯನ್ನು ಬೆಂಗಳೂರಿನಲ್ಲಿ ಸಯನೈಡ್ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಕೊಣಾಜೆಯ ಅಂದಿನ ಇನ್ಸ್ಪೆಕ್ಟರ್ ಲಿಂಗಪ್ಪ ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಬಳಿಕ ಸಿಒಡಿ ಇನ್ಸ್ಪೆಕ್ಟರ್ ವಝೀರ್ ಸಾಬ್ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.