ತೆಂಕನಿಡಿಯೂರು- ತಲ್ಲೂರು: ಮನೆ, ನಿವೇಶನ ರಹಿತರ ಸಮಾವೇಶ
ಉಡುಪಿ, ಅ.26: ತಲ್ಲೂರು ಗ್ರಾಪಂ ವ್ಯಾಪ್ತಿಯ ಮನೆ, ನಿವೇಶನ ರಹಿತರ ಸಮಾವೇಶ ಇತ್ತೀಚೆಗೆ ತಲ್ಲೂರು ಮೂತೆದಾರ್ರರ ಸಭಾಭವನದಲ್ಲಿ ಜರಗಿತು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನ.18ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ನಿವೇಶನ ರಹಿತರ ಭೂಮಿ ಹಕ್ಕಿನ ಬೃಹತ್ ಹೋರಾಟ, ಧರಣಿ ಮುಷ್ಕರಕ್ಕೆ ಸಿಐಟಿಯು ಜಿಲ್ಲಾ ಸಮಿತಿಗೆ ಸಂಯೋಜಿಸಲ್ಪಟ್ಟ ಎಲ್ಲಾ ಕಾರ್ಮಿಕ ಸಂಘಗಳು ಸಂಪೂರ್ಣ ಬೆಂಬಲ ನೀಡಲಿವೆ ಎಂದು ತಿಳಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ನಿವೇಶನ ರಹಿತರ ಈ ನಿರ್ಣಾಯಕ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ನಿವೇಶನ ರಹಿತ ಫಲಾನುಭವಿ ಗಳು ಭಾಗಹಿಸಬೇಕು ಎಂದು ಕರೆ ನೀಡಿದರು.
ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ನಾಗರತ್ನ ನಾಡ, ಅಮ್ಮಯ್ಯ ಪೂಜಾರಿ, ರಾಘವೇಂದ್ರ ಉಪ್ಪುಂದ ಉಪಸ್ಥಿತರಿದ್ದರು.
ತೆಂಕನಿಡಿಯೂರು: ತೆಂಕನಿಡಿಯೂರು ಗ್ರಾಪಂ ವ್ಯಾಪ್ತಿಯ ಮನೆ, ನಿವೇಶನ ರಹಿತ ಅರ್ಹ ಫಲಾನುಭವಿಗಳ ಸಮಾವೇಶ ಇಂದು ಸ್ಥಳೀಯ ಸಮು ದಾಯ ಭವನದಲ್ಲಿ ಜರುಗಿತು. ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಸಮಾವೇಶ ಉದ್ಘಾಟಿಸಿದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಕವಿ ರಾಜ್ ಎಸ್., ಉಮೇಶ್ ಕುಂದರ್, ನಳಿನಿ ಎಸ್. ಉಪಸ್ಥಿತರಿದ್ದರು.