×
Ad

ಉಪ್ಪೂರು ಜಿಟಿಟಿಸಿ ಕಾಲೇಜಿಗೆ ಶೋಭಾ ಕೊಡುಗೆ ಶೂನ್ಯ: ಪ್ರಮೋದ್

Update: 2019-10-26 21:40 IST

ಉಡುಪಿ, ಅ.26: ಉಪ್ಪೂರಿನಲ್ಲಿ ಸುಮಾರು 44 ಕೋಟಿ ರೂ.ವೆಚ್ಚದಲ್ಲಿ ತಲೆ ಎತ್ತುತ್ತಿರುವ ಸರಕಾರಿ ಉಪಕರಣಾಗಾರ ತರಬೇತಿ ಕೇಂದ್ರ (ಜಿಟಿಟಿಸಿ) ಪ್ರಾರಂಭಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರ ಕೊಡುಗೆ ಶೂನ್ಯ, ಶಾಸಕ ಹಾಗೂ ಸಚಿವನಾಗಿದ್ದಾಗ ನಾನು ಮಾಡಿದ ಸಾಧನೆಯನ್ನು ತನ್ನದೆಂದು ಹೇಳಿಕೊಳ್ಳುತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್, ಇತ್ತೀಚೆಗೆ ಸಂಸದೆ ಶೋಭಾ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಉಪ್ಪೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಟಿಟಿಸಿಯ ಕಟ್ಟಡ ಕಾಮಗಾರಿ ಪರಿಶೀಲನೆಗೆ ಭೇಟಿ ನೀಡಿದ್ದು, ಅನಂತರ ಈ ಕುರಿತು ಟ್ವಿಟ್ ಮಾಡಿದ ಭಟ್, ಇದು ಶೋಭಾರ ಮುತುವರ್ಜಿಯಿಂದ ನಿರ್ಮಾಣ ಗೊಳ್ಳುತ್ತಿದೆ ಎಂದು ತಿಳಿಸಿದ್ದರು.

ಶಾಸಕರ ಈ ಹೇಳಿಕೆಯನ್ನು ಖಂಡಿಸಿದ ಪ್ರಮೋದ್ ಮಧ್ವರಾಜ್, ಪ್ರಾಯಶ: ಇದಕ್ಕಿಂತ ಅಪ್ಪಟ್ಟ ಸುಳ್ಳು ಇನ್ನೊಂದಿಲ್ಲ. ಇದನ್ನು ನಾನು ದಾಖಲೆಗಳೊಂದಿಗೆ ಸಾಬೀತು ಪಡಿಸುತಿದ್ದೇನೆ ಎಂದು ತನ್ನ ವಾದಕ್ಕೆ ಪೂರಕವಾಗಿ ದಾಖಲೆಗಳನ್ನು ನೀಡಿದರು.

2013ರಲ್ಲಿ ತಾನು ಶಾಸಕನಾಗಿ ಆಯ್ಕೆಯಾದಾಗ ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದ (ಪಿಜಿ ಸೆಂಟರ್) ಸ್ಥಾಪನೆಗಾಗಿ ಉಪ್ಪೂರು ಮತ್ತು ಬೆಳಪು ವನ್ನು ಪರಿಶೀಲಿಸಲಾಗಿತ್ತು. ಉಪ್ಪೂರು ಜಾಗ ಇಳಿಜಾರು ಆಗಿದ್ದ ಕಾರಣ, ಮಂಗಳೂರು ವಿವಿ ತಜ್ಞರ ತಂಡ ಬೆಳಪನ್ನು ಆಯ್ಕೆ ಮಾಡಿತ್ತು. ಆಗ ಇದಕ್ಕಾಗಿ ರಘುಪತಿ ಭಟ್ ತನ್ನ ಮೇಲೆ ಗೂಬೆ ಕೂರಿಸಿದ್ದರು ಎಂದು ಪ್ರಮೋದ್ ದೂರಿದರು.

ಇದೇ ಕಾರಣದಿಂದ ಜಿಲ್ಲೆಯ ಬಡ ಯುವಕರಿಗೆ ಅನುಕೂಲವಾಗಲು, ವೃತ್ತಿಪರ ಶಿಕ್ಷಣದಲ್ಲಿ ತರಬೇತಿ ಪಡೆಯಲು ಉಪ್ಪೂರಿನಲ್ಲಿ ಜಿಟಿಟಿಸಿ ಕಾಲೇಜನ್ನು ಸ್ಥಾಪಿಸಲು ತಾನು ಮುಂದಾದೆ. ಇದಕ್ಕಾಗಿ ತುಂಬಾ ಪ್ರಯತ್ನ ಪಟ್ಟುಜಾಗವನ್ನು ಹುಡುಕಿದ್ದಲ್ಲದೇ, ಅಂದಿನ ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳೆ ಅವರ ಮನ ಒಲಿಸಿ ಕೇಂದ್ರವನ್ನು ಮಂಜೂರು ಮಾಡಿಸಿಕೊಂಡಿದ್ದೆ ಎಂದರು.

 ಕೇಂದ್ರದ ಸ್ಥಾಪನೆಗೆ ಉಪ್ಪೂರು ಪ್ರೌಢ ಶಾಲೆಯಲ್ಲಿದ್ದ ಐದು ಎಕರೆ ಜಾಗವನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಗಳನ್ನು ಒಪ್ಪಿಸಿ ಕೈಗಾರಿಕಾ ಇಲಾಖೆಗೆ ವರ್ಗಾಯಿಸಿದ್ದೆ. ಬಳಿಕ ನಬಾರ್ಡ್‌ನಿಂದ 44 ಕೋಟಿ ರೂ. ಸಾಲವನ್ನು ಮಂಜೂರು ಮಾಡಿಸಿದ್ದೇನೆ. ನಾನೇ ಶಾಸಕನಾಗಿದ್ದಿದ್ದರೆ ಕಳೆದ ಜೂನ್‌ನಿಂದ ಕಾಲೇಜು ಪ್ರಾರಂಭಗೊಳ್ಳುತಿತ್ತು ಎಂದು ಪ್ರಮೋದ್ ನುಡಿದರು.

ಈ ಮೂಲಕ ನಾನು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಜಿಟಿಟಿಸಿಯನ್ನು ನಬಾರ್ಡ್ ಸಾಲದಿಂದ ನಿರ್ಮಿಸುತ್ತಿರುವುದರಿಂದ, ನಬಾರ್ಡ್ ಕೇಂದ್ರಕ್ಕೆ ಸೇರಿದ ಸಂಸ್ಥೆ ಎಂದು ಶೋಭಾ ವಾದ ಮಾಡುತಿದ್ದಾರೆ. ಆದರೆ ನಬಾರ್ಡ್ ರಾಜ್ಯ ಸರಕಾರದ ಕ್ಯಾಬಿನೆಟ್ ಗ್ಯಾರಂಟಿ ನೀಡಿದರಷ್ಟೇ ಸಾಲದ ರೂಪದಲ್ಲಿ ಅನುದಾನ ನೀಡುತ್ತದೆಯೇ ಹೊರತು ಪುಕ್ಸಟೆ ಅಲ್ಲ. ಈ ಸಾಲವನ್ನು ರಾಜ್ಯ ಸರಕಾರವೇ ತೀರಿಸಬೇಕಾಗಿದೆ ಎಂದು ಪ್ರಮೋದ್ ವಿವರಿಸಿದರು.

ಸಂಸದೆಯಾಗಿ ಶೋಭಾ ಕಳೆದ ಆರು ವರ್ಷಗಳಿಂದ ಯಾವುದೇ ಕೆಲಸ ಮಾಡದೇ, ಯಾರೋ ಮಾಡಿದ ಕೆಲಸವನ್ನು ತಾನೇ ಮಾಡಿಸಿದ್ದು ಎಂದು ಹೇಳಿಕೊಂಡು ಬರುತಿದ್ದಾರೆ. ಉಪ್ಪೂರು ಜಿಟಿಟಿಸಿ ಕಾಲೇಜಿಗೆ ಒಂದು ನಯಾಪೈಸೆ ಕೊಡುಗೆ ಇಲ್ಲದೇ ತಾನೇ ಮಾಡಿದ್ದು ಎನ್ನುತ್ತಾರೆ. ಮೊನ್ನೆ ರಾಜ್ಯ ಕಂಡ ಅತ್ಯುತ್ತಮ ಸಿಎಂ ಸಿದ್ಧರಾಮಯ್ಯರನ್ನು ಚೀಫ್ ರಾಜಕಾರಣಿ ಎಂದು ಕರೆದ ಶೋಭಾ ಈಗ ತಾನೆಂಥಾ ಚೀಫ್ ರಾಜಕಾರಣಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಲೇವಡಿ ಮಾಡಿದರು.

ಹೀಗೆ ಯಾರೋ ಮಾಡಿದ ಕೆಲಸವನ್ನು ತಮ್ಮದೆಂದು ಹೇಳಿಕೊಳ್ಳುವ ಬದಲು , ನಿಮಗೆ ಸಾಧ್ಯವಾದರೆ ಜಿಟಿಟಿಸಿ ಕೇಂದ್ರಕ್ಕಾಗಿ ಐದು ಎಕರೆ ಜಾಗ ಬಿಟ್ಟುಕೊಟ್ಟ ಉಪ್ಪೂರು ಪ್ರೌಢ ಶಾಲೆಯ ಕ್ರೀಡಾಂಗಣ ನಿರ್ಮಾಣಕ್ಕೆ ಸಂಸದೆ ಹಾಗೂ ಶಾಸಕರು ತಲಾ ಹತ್ತು ಲಕ್ಷ ರೂ.ಅನುದಾನವನ್ನು ಬಿಡುಗಡೆಗೊಳಿಸಿ ಎಂದು ಸವಾಲೆಸೆದರು. ಕಾಲೇಜಿನ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಉದ್ಘಾಟಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ದಿನಕರ ಹೇರೂರು, ನಗರಸಭಾ ಸದಸ್ಯ ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಜನಾದನರ್ ಭಂಡಾರಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News